ರಾಷ್ಟ್ರೀಯ

ನಾಳೆ ಸಂಜೆ ತೆರೆಯಲಿದೆ ಶಬರಿಮಲೆ ದ್ವಾರ: ಮಹಿಳೆಯರಿಗೆ ಪ್ರವೇಶ ನಿಷೇಧ!

Pinterest LinkedIn Tumblr


ಶಬರಿಮಲೆ (ಕೇರಳ): ಶನಿವಾರ ಸಂಜೆ ಶಬರಿಮಲೆ ಕ್ಷೇತ್ರದ ಬಾಗಿಲು ತೆರೆಯಲಿದೆ. ಈ ಬಾರಿಯ ಮಕರ ಮಹೋತ್ಸವ ಹಾಗೂ ಮಂಡಲಕ್ಕಾಗಿ ಶಬರಿಮಲೆಯ ಬಾಗಿಲು ಅಧಿಕೃತವಾಗಿ ತೆರಲಾಗುವುದು ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ. ಇದೇ ವೇಳೆ, ಶಬರಿಮಲೆಗೆ ಮಹಿಳೆಯರ ಪ್ರವೇಶ ಬೇಡ ಎಂದು ಕೇರಳ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮರು ಪರಿಶೀಲನಾ ಅರ್ಜಿ ವಿಚಾರಣೆಯನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ, ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸುಪ್ರೀಂನಲ್ಲಿ ಸಲ್ಲಿಕೆಯಾಗಿರುವ ಮರು ಪರಿಶೀಲನಾ ಅರ್ಜಿ ತೀರ್ಪು ವಿಳಂಬವಾಗುವ ಹಿನ್ನೆಲೆಯಲ್ಲಿ ಸರಕಾರ ಕಾನೂನು ಸಲಹೆ ಪಡೆದುಕೊಂಡಿದೆ. ಅಂತಿಮ ತೀರ್ಪು ಬರುವ ತನಕ ಯುವತಿಯರ ಪ್ರವೇಶ ಬೇಡ ಎಂಬ ಸಲಹೆ ಹಿನ್ನೆಲೆಯಲ್ಲಿ ಯುವತಿಯರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶಬರಿಮಲೆ ಯಾತ್ರೆ ಶನಿವಾರ ಆರಂಭಗೊಳ್ಳುತ್ತಿದ್ದಂತೆಯೇ ಹಿಂದಿನ ಸುಪ್ರೀಂ ಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಸುಮಾರು 30ರಷ್ಟು ಯುವತಿಯರು ಶಬರಿಮಲೆ ಪ್ರವೇಶಕ್ಕೆ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸುಪ್ರೀಂ ತೀರ್ಪು ಸ್ಪಷ್ಟವಾಗಿ ಹೊರಬಿದ್ದ ಮೇಲೆಯೇ ಅಂತಿಮ ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಯುವತಿಯರ ಪ್ರವೇಶ ಬೇಡವೆಂದು ಸರಕಾರ ತೀರ್ಮಾನಿಸಿದೆ. ಒಂದು ವೇಳೆ ಈ ಬಾರಿಯೂ ಯುವತಿಯರು ಶಬರಿಮಲೆ ದರ್ಶನಕ್ಕೆ ಆಗಮಿಸಿದರೆ, ಅವರಿಗೆ ಪೊಲೀಸರ ವಿಶೇಷ ಭದ್ರತೆ ಒದಗಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಈಗಾಗಲೇ ಸರಕಾರ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದೆ. ಕಳೆದ ಬಾರಿ ಸನ್ನಿಧಾನದಲ್ಲಿ ಮಹಿಳಾ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ಬಾರಿ ಮಹಿಳಾ ಪೊಲೀಸರನ್ನೂ ನಿಯೋಜನೆ ಮಾಡದಿರಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಶಬರಿಮಲೆ ದರ್ಶನಕ್ಕಾಗಿ 40ಕ್ಕೂ ಹೆಚ್ಚು ಯುವತಿಯರು ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿದ್ದರು. ಆ ಪೈಕಿ ಐವರು ಮಾತ್ರ ಶಬರಿಮಲೆ ಪ್ರವೇಶಕ್ಕೆ ಆಗಮಿಸಿದ್ದರು.

ಈ ಬಾರಿ ನಿಷೇಧಾಜ್ಞೆಯೂ ಇಲ್ಲ..!

ಕಳೆದ ವರ್ಷ ಮಕರ ಮಹೋತ್ಸವದ ವೇಳೆ ಶಬರಿಮಲೆಯಲ್ಲಿ ಹೇರಲಾಗಿದ್ದ ನಿಷೇಧಾಜ್ಞೆ ಈ ಬಾರಿ ಇರುವುದಿಲ್ಲ ಎಂದು ತಿಳಿದುಬಂದಿದೆ.
ಮಂಡಲ ಹಾಗೂ ಮಕರ ಮಹೋತ್ಸವದ ಸಂದರ್ಭ ಪಂಪಾ ಹಾಗೂ ಸನ್ನಿಧಾನದಲ್ಲಿ ಕಳೆದ ವರ್ಷ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಆದರೆ ಈ ಬಾರಿ ಕೇವಲ ಭದ್ರತೆ ನೀಡಲು ತೀರ್ಮಾನಿಸಲಾಗಿದೆ. ಯಾವುದೇ ಕಾನೂನು ಭಂಗ ಉಂಟಾದರೆ ಮಾತ್ರ ಅದನ್ನು ಎದುರಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ.

ಕಳೆದ ಬಾರಿ ಶಬರಿಮಲೆ ಸನ್ನಿಧಾನದಲ್ಲಿ ಐಜಿಗಳಿಗೆ ಭದ್ರತಾ ಹೊಣೆಗಾರಿಕೆ ನೀಡಲಾಗಿತ್ತು. ಈ ವರ್ಷ ಎಸ್‌ಪಿಗಳಿಗೆ ಭದ್ರತೆ ಜವಾಬ್ದಾರಿ ನೀಡಲಾಗಿದೆ. ಶಬರಿಮಲೆ ಯಾತ್ರೆ ಸಂದರ್ಭ ಶಬರಿಮಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 10,017 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಪೈಕಿ ಎಸ್ಪಿ ಹಾಗೂ ಎಎಸ್ಪಿ ಹಂತದ 24 ಅಧಿಕಾರಿಗಳು, 112 ಡಿವೈಎಸ್ಪಿಗಳು, 264 ಇನ್ಸ್‌ಪೆಕ್ಟರ್‌, 1,185 ಎಸ್‌ಐ, ಎಎಸ್‌ಐ, 307 ಮಹಿಳಾ ಸಿಬ್ಬಂದಿ ಸಹಿತ 8,402 ಸಿವಿಲ್‌ ಪೊಲೀಸ್‌ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

Comments are closed.