ರಾಷ್ಟ್ರೀಯ

ರಾಜಧಾನಿಯನ್ನು ಕಾಡುತ್ತಿರುವ ವಾಯುಮಾಲಿನ್ಯ : ವಿಮಾನಗಳ ಹಾರಾಟಕ್ಕೆ ತೊಂದರೆ

Pinterest LinkedIn Tumblr

ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ವಾಯುಮಾಲಿನ್ಯ ಸ್ಥಿತಿ ಇಂದು ಗಂಭೀರ ಮಟ್ಟಕ್ಕೆ ಹೋಗಿದೆ. ದೆಹಲಿಯ ವಿವಿಧ ಭಾಗಗಳಲ್ಲಿ ಆದಿತ್ಯವಾರದಂದು ಮಳೆಯಾಗುವ ಮೂಲಕ ಶುದ್ಧ ಗಾಳಿಯ ಕೊರತೆ ಇನ್ನಷ್ಟು ಹೆಚ್ಚಾಗಿದೆ. ಇನ್ನು ದಟ್ಟ ಮಂಜು ಮತ್ತು ಸ್ಪಷ್ಟ ಗೋಚರತೆಯ ಕೊರತೆಯಿಂದಾಗಿ ಹಲವು ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.

ದಟ್ಟ ಹೊಗೆಯಿಂದಾಗಿ ಸುಮಾರು 32 ವಿಮಾನಗಳ ಹಾರಾಟ ಮಾರ್ಗವನ್ನು ಬದಲಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಹಲವು ಭಾಗಗಳಲ್ಲಿ ಹೊಗೆಯ ತೆಳು ಪದರ ಆವರಿಸಿಕೊಂಡಿದ್ದು ಏನೂ ಕಾಣದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಆದಿತ್ಯವಾರ ಮಧ್ಯಾಹ್ನದ ವೇಳೆಗೆ ದೆಹಲಿಯ ಹಲವು ಪ್ರದೇಶಗಳಲ್ಲಿ ಮತ್ತು ರಾಷ್ಟ್ರರಾಜಧಾನಿ ಭಾಗದಲ್ಲಿ ಮಾಲಿನ್ಯ ಸ್ಥಿತಿ 1600 ಅಂಕಗಳನ್ನು ದಾಟಿದ್ದು ಇದು ಗಂಭೀರ ಅಪಾಯದ ಸೂಚನೆಯಾಗಿದೆ.

ಜಹಾಂಗಿರಪುರಿಯಲ್ಲಿ ವಾಯು ಗುಣಮಟ್ಟ ಮಾಪನ 1690, ದೆಹಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿ 1120, ಗುರ್ಗಾಂವ್ ನಲ್ಲಿ 990 ಮತ್ತು ನೋಯ್ಡಾದಲ್ಲಿ 1974 ವಾಯು ಗುಣಮಟ್ಟ ಮಾಪನ ದಾಖಲಾಗಿದೆ.

ದೀಪಾವಳಿ ಆಚರಣೆಯ ಬಳಕ ದೆಹಲಿ ನಗರ ಪರಿಸರದಲ್ಲಿ ವಾಯು ಗುಣಮಟ್ಟ ತಳ ಕಂಡಿದ್ದು ಇದು ಕಳೆದ ಐದು ವರ್ಷಗಳಲ್ಲೇ ಅತೀ ಕಳಪೆ ಗುಣಮಟ್ಟವಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ತಕ್ಷಣವೇ ಮಧ್ಯಪ್ರವೇಶಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ ಮತ್ತು ವಾಯು ಗುಣಮಟ್ಟ ಸುಧಾರಣೆಗೆ ಕೇಂದ್ರ ಸರಕಾರ ಯಾವ ಕ್ರಮ ಕೈಗೊಂಡರೂ ರಾಜ್ಯ ಸರಕಾರ ಬೆಂಬಲಿಸಲಿದೆ ಎಂದೂ ಸಹ ಕೇಜ್ರಿವಾಲ್ ಅವರು ಹೇಳಿದ್ದಾರೆ.

Comments are closed.