ರಾಷ್ಟ್ರೀಯ

ಪ್ರೀತಿ ಮಾಡು ಎಂದು ಹಿಂದೆ ಬಿದ್ದಿದ್ದ ಯುವಕನ ಕಿರುಕುಳಕ್ಕೆ ಬೇಸತ್ತು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ

Pinterest LinkedIn Tumblr


ಹೈದರಾಬಾದ್: ಪ್ರೀತಿ ಮಾಡು ಎಂದು ಹಿಂದೆ ಬಿದ್ದ ಯುವಕನ ಚೇಷ್ಟೆಗಳಿಂದ ನೊಂದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.

25 ವರ್ಷದ ಮೀನಾಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಕಾರಣನಾದ ಯುವಕನ ಬಗ್ಗೆ ತನ್ನ ನೋಟ್ ಬುಕ್ ನಲ್ಲಿ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.

ಮೀನಾಕ್ಷಿ ಶ್ರೀಕಾಕುಳಂನ ಗುರುದಾಸಪುರಂ ಗ್ರಾಮದ ನಿವಾಸಿಯಾಗಿದ್ದು, ತನ್ನೊಂದಿಗೆ ಪಿಯುಸಿ ಓದಿದ್ದ ಯುವಕ ತುಲಸಿರಾವ್ ನೊಂದಿಗೆ ಉತ್ತಮ ಸ್ನೇಹವಿದ್ದ ಕಾರಣ ಫೋನ್ ನಂಬರ್ ನೀಡಿದ್ದಳು. ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಆದರೆ ಫೋನ್ ನಂಬರ್ ಪಡೆದ ತುಲಸಿರಾವ್ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ ಆತನ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಸ್ನೇಹಿತನ ಜೀವನಕ್ಕೆ ತೊಂದರೆಯಾಗಬಾರದು ಎಂದು ಮೀನಾಕ್ಷಿ ಈ ವಿಚಾರವನ್ನು ಕುಟುಂಬಸ್ಥರಿಗೆ ಹೇಳಿರಲಿಲ್ಲ.

ಮೀನಾಕ್ಷಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಆಕೆಗೆ ತೊಂದರೆ ನೀಡಲು ಆರಂಭಿಸಿದ್ದ ಆತ, ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಸಿದ್ದ. ಅಲ್ಲದೇ ಈ ಹಿಂದೆ ಆತನೊಂದಿಗೆ ತೆಗೆದುಕೊಂಡಿದ್ದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಇದರಿಂದ ನೊಂದ ಮೀನಾಕ್ಷಿ ಅ.5 ರಂದು ಆತ್ಮಹತ್ಯೆಗೆ ಶರಣಾಗಿದ್ದಳು.

ಬಾವಿಯಲ್ಲಿ ಯುವತಿಯ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವತಿ ಪೋಷಕರು ನೀಡಿದ ದೂರಿನ ಮೇರೆಗೆ ವಿಚಾರಣೆ ಆರಂಭಿಸಿದ್ದ ಪೊಲೀಸರಿಗೆ ಮೃತ ಮೀನಾಕ್ಷಿ ಬರೆದಿಟ್ಟಿದ್ದ ಡೇಟ್ ನೋಟ್ ಸಿಕ್ಕಿತ್ತು.

ಡೇತ್ ನೋಟ್‍ನಲ್ಲೇನಿದೆ: ‘ನನಗೆ ಈ ಹಿಂದೆ ತುಲಸಿ ಹಾಗೂ ಕೃಷ್ಣ ಇಬ್ಬರು ಸ್ನೇಹಿತರು. ಆದರೆ ನನ್ನ ಫೋನ್ ನಂಬರ್ ಪಡೆದು ಮದುವೆಯಾಗುತ್ತೇನೆ ಎಂದು ಹೇಳಿ ಕರೆ ಮಾಡುತ್ತಿದ್ದ ಹಿಂಸೆಯ ಕುರಿತು ನಾನು ಕೃಷ್ಣ ಬಳಿ ಹೇಳಿಕೊಳ್ಳುತ್ತಿದೆ. ಪೊಲೀಸರಿಗೆ ಹೇಳಿದರೆ ಕಷ್ಟಬಿದ್ದು ಸಿಆರ್ ಪಿಎಫ್‍ನಲ್ಲಿ ಕೆಲಸ ಪಡೆದಿದ್ದ ಆತ ಉದ್ಯೋಗ ಕಳೆದುಕೊಳ್ಳುತ್ತಾನೆ. ಸರ್ಕಾರಿ ಉದ್ಯೋಗ ಪಡೆಯುವುದರ ಹಿಂದಿನ ಕಷ್ಟವೇನು ಎಂಬುವುದು ನನಗೆ ಗೊತ್ತಿದೆ. ಆದ್ದರಿಂದ ನನ್ನ ಹಾಗೂ ಆತನ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ನಾನೇ ದೂರವಾಗುತ್ತಿದ್ದೇನೆ. ಹಿಂದೊಮ್ಮೆ ನನಗೆ ಕುಟುಂಬಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಆತ, ಈಗ ನನ್ನನ್ನು ಈ ಲೋಕದಲ್ಲೇ ಇಲ್ಲದಂತೆ ಮಾಡುತ್ತೇನೆ ಎಂದು ಹೇಳುತ್ತಿದ್ದಾನೆ. ಎಲ್ಲವೂ ನನಗೆ ಈಗ ಅರ್ಥವಾಗುತ್ತಿದೆ. ಪ್ರತಿ ಕ್ಷಣ ಭಯದಿಂದ ಬದುಕುವುದು ವ್ಯರ್ಥ. ಐ ಮಿಸ್ ಮೈ ಫ್ಯಾಮಿಲಿ’ ಎಂದು ಮೀನಾಕ್ಷಿ ಬರೆದಿಟ್ಟಿದ್ದಾಳೆ.

Comments are closed.