ನವದೆಹಲಿ: ಎಐಸಿಸಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾರನ್ನು ಆ ಹುದ್ದೆಯಿಂದ ಅಧಿಕೃತವಾಗಿ ಕಿತ್ತು ಹಾಕಿ ಪಕ್ಷ ಆದೇಶ ಹೊರಡಿಸಿದೆ. ರಮ್ಯಾ ಸ್ಥಾನಕ್ಕೆ ರೋಹನ್ ಗುಪ್ತಾ ಅವರನ್ನು ನೇಮಕ ಮಾಡಿ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ.
2013ರಲ್ಲಿ ಮಂಡ್ಯ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಮ್ಯಾ ಆರು ತಿಂಗಳ ಕಾಲ ಸಂಸದೆಯಾಗಿ ಕಾರ್ಯ ನಿರ್ವಹಿಸಿ, 2014ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಬಳಿಕ ರಾಜ್ಯ ರಾಜಕೀಯ ಬಿಟ್ಟು ದೆಹಲಿಗೆ ಹೋದರು. ರಾಹುಲ್ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾಗೆ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ನೇಮಕಮಾಡಲಾಗಿತ್ತು.
ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಬಳಿಕ ರಮ್ಯಾ ಟ್ವೀಟರ್ ಫೇಸ್ಬುಕ್ನಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದರು. ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರಮಣಕಾರಿ ಟ್ವೀಟ್ ಮೂಲಕ ಟೀಕಿಸುತ್ತಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಕ್ರಿಯಾಶೀಲರಾಗಿರುವಂತೆ ನೋಡಿಕೊಂಡಿದ್ದರು.
ಆದರೆ, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಏಕಾಏಕಿ ತಮ್ಮ ಟ್ವೀಟರ್ ಖಾತೆಯಲ್ಲಿ ಮೌನವಹಿಸುವ ಮೂಲಕ ಅವರು ಹಲವು ಅನುಮಾನಗಳನ್ನು ಮೂಡುವಂತೆ ಮಾಡಿದ್ದರು. ಅಲ್ಲದೇ ತಮ್ಮ ಖಾತೆಗಳಿಂದ ಹೊರಬರುವ ನಿರ್ಣಯವನ್ನು ಕೈಗೊಂಡರು. ಕಾಂಗ್ರೆಸ್ ಸೇರಿದಂತೆ ತಮ್ಮ ವೈಯಕ್ತಿಕ ಖಾತೆಯಲ್ಲಿ ಏಕಾಏಕಿ ಸ್ಥಬ್ತತೆ ಕಾಯ್ದುಕೊಂಡ ಅವರು, ತಮ್ಮ ಟ್ವಿಟರ್ ಖಾತೆಯಲ್ಲಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಎಂಬ ವಿವರವನ್ನು ತೆಗೆದು ಹಾಕಿ ಅಚ್ಚರಿ ಮೂಡಿಸಿದ್ದರು.
ಲೋಕಸಭಾ ಚುನಾವಣೆಯಿಂದ ರಮ್ಯಾ ಟ್ವೀಟರ್ ಖಾತೆಯಿಂದ ಅಂತರ ಕಾಯ್ದುಕೊಂಡ ಪರಿಣಾಮ ಪಕ್ಷಕ್ಕೆ ಕೂಡ ಸಾಕಷ್ಟು ಹಾನಿಯುಂಟು ಮಾಡಿತು. ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗದೆ ಹಿನ್ನೆಲೆ ಪಕ್ಷದ ಕಾರ್ಯಕ್ರಮಗಳನ್ನು ಕಾಣಿಸಿಕೊಳ್ಳದ ಅವರು ಉತ್ಸಾಹ ಕಳೆದುಕೊಂಡರು ಎಂಬ ಮಾತು ಕೂಡ ಕೇಳಿಬಂದಿತು.
ಚುನಾವಣೆ ಮುಗಿದು ಎರಡು ತಿಂಗಳಾದರೂ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಮರಳಿ ಬರದಿರುವುದನ್ನು ಗಮನಿಸಿದ ಸೋನಿಯಾ ಗಾಂಧಿ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಿ ರೋಹನ್ ಗುಪ್ತಾ ಅವರನ್ನು ನೇಮಕ ಮಾಡಿದ್ದಾರೆ.
ರಾಜ್ಯ, ದೆಹಲಿ ರಾಜಕಾರಣದಲ್ಲಿ ಉತ್ಸಾಹ ಕಳೆದುಕೊಂಡ ರಮ್ಯಾ ಮದುವೆ ಸುದ್ದಿ ಕೂಡ ಇತ್ತೀಚೆಗೆ ಹರಿದಾಡಿತ್ತು. ಮಾಧ್ಯಮ ಮತ್ತು ರಾಜಕಾರಣಿಗಳ ಕಣ್ಣಿಗೂ ಸಿಗದ ರಮ್ಯಾ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯೇ ಯಾರ ಬಳಿ ಇಲ್ಲ.
Comments are closed.