ನವದೆಹಲಿ: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ದಿನಾಂಕ ನಿಗದಿ ಮಾಡಿದೆ. ನಾಲ್ಕು ಬಾರಿ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ್ದ ಕೋರ್ಟ್ ಕೊನೆಗೂ ದಿನಾಂಕ ನಿಗದಿ ಮಾಡಿದೆ.
ರಮೇಶ್ ಕುಮಾರ್ ಅವರು ಆದೇಶ ಹೊರಡಿಸಿದ ತಕ್ಷಣ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ತುರ್ತು ವಿಚಾರಣೆಗೆ ಕೋರ್ಟ್ ನಿರಾಕರಿಸಿತ್ತು. ಆ ನಂತರ ಸೆ.11ಕ್ಕೆ ಶಾಸಕರ ಅರ್ಜಿ ವಿಚಾರಣೆಗೆ ಪಟ್ಟಿ ನಿಗದಿಯಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ವಿಚಾರಣೆಯನ್ನು ಪಟ್ಟಿಯಿಂದ ಅಳಿಸಲಾಗಿತ್ತು. ಸೆ.16ಕ್ಕೆ ನಿಗದಿಯಾಗಿದ್ದ ವಿಚಾರಣೆಯೂ ಅಳಿಸಿಹೋಗಿತ್ತು. ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ವಕೀಲರು ಮೌಖಿಕವಾಗಿ ಕೇಳಿಕೊಂಡರು. ಆದರೆ ನ್ಯಾಯಪೀಠ ಮಾತ್ರ ಈ ಬೇಡಿಕೆಗೆ ಮಹತ್ವ ನೀಡಿರಲಿಲ್ಲ.
ಈಗ ಕೊನೆಗೂ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ ಮಾಡಿದ್ದು, ಮಂಗಳವಾರ ಬೆಳಗ್ಗೆ 10.30 ಕ್ಕೆ ನ್ಯಾ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಈ ಮೂಲಕ ಅರ್ಜಿ ಸಲ್ಲಿಸಿ 45 ದಿನಗಳ ಬಳಿಕ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಶೀಘ್ರ ತೀರ್ಪು ಪ್ರಕಟಿಸುವ ವಿಶ್ವಾಸದಲ್ಲಿ ಅನರ್ಹ ಶಾಸಕರಿದ್ದಾರೆ.
Comments are closed.