ರಾಷ್ಟ್ರೀಯ

ಬಿಜೆಪಿ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ನಿಧನ

Pinterest LinkedIn Tumblr

ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ, ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ವಿಧಿವಶರಾಗಿದ್ದಾರೆ.

66 ವರ್ಷದ ಅರುಣ್ ಜೇಟ್ಲಿ ಅವರು ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಗಸ್ಟ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ಜೇಟ್ಲಿ ಇಹಲೋಕ ತ್ಯಜಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ 2019ರ ಲೋಕಸಭೆ ಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ನವದೆಹಲಿಯಲ್ಲಿ ಕಿಶನ್ ಹಾಗೂ ರತನ್ ಪ್ರಭಾ ದಂಪತಿಗಳಿಗೆ 1952ರಲ್ಲಿ ಜನಿಸಿದರು. ತಂದೆ ವಕೀಲರಾಗಿದ್ದರು, ಇವರು 1969-70ರ ಅವಧಿಯಲ್ಲಿ ನವದೆಹಲಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದರು . 1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡರು. 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿಯನ್ನು ಪಡೆದುಕೊಂಡರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ, ಅವರ ವಿದ್ಯಾಭ್ಯಾಸದ ಹಾಗೂ ಇತರ ಚಟುವಟಿಕೆಗಳಲ್ಲಿ ಉತ್ತಮ ಮಟ್ಟದ ಸಾಧನೆಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

ಅರುಣ್ ಜೇಟ್ಲಿಯವರು ತಮ್ಮ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ವಿದ್ಯಾರ್ಥಿ ವಿಭಾಗವಾದ ಎ‌ಬಿವಿಪಿಯ ಸಕ್ರಿಯ ಸದಸ್ಯರಾಗಿದ್ದರು. 1999ರ ಚುನಾವಣೆಯ ಸಮಯದಲ್ಲಿ ಬಿಜೆಪಿ ಪಕ್ಷದ ವಕ್ತಾರರಾಗಿ ಆಯ್ಕೆಯಾದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಡಿಯಲ್ಲಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, 1999 ಅಕ್ಟೋಬರ್ 13ರಲ್ಲಿ ಜೇಟ್ಲಿ ಮಾಹಿತಿ ಹಾಗೂ ಪ್ರಸಾರದ ರಾಜ್ಯ ಮಂತ್ರಿಯಾಗಿ(ಸ್ವತಂತ್ರ ಹೊಣೆಗಾರಿಕೆ)ನೇಮಕಗೊಂಡರು. ಅಲ್ಲದೆ ಅವರು ಬಂಡವಾಳಹರಣದ ರಾಜ್ಯ ಮಂತ್ರಿಯಾಗಿ(ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡರು.

ನವೆಂಬರ್ 2000ರಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಆಯ್ಕೆಯಾದರು. ಜೊತೆಯಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳು ಹಾಗೂ ಶಿಪ್ಪಿಂಗ್ ಮಂತ್ರಿಯಾಗಿ ನೇಮಕಗೊಂಡರು. 2004ರಲ್ಲಿ ನ್ಯಾಷನಲ್ ಡೆಮೋಕ್ರಟಿಕ್ ಅಲಯನ್ಸ್ ಸೋಲನ್ನನುಭವಿಸಿದಾಗ, ಜೇಟ್ಲಿಯವರು ಬಿಜೆಪಿಯ ಜನರಲ್ ಸೆಕ್ರೆಟರಿ ಸ್ಥಾನಕ್ಕೆ ಹಿಂದಿರುಗಿದರು ಹಾಗೂ ಕಾನೂನು ವೃತ್ತಿಯನ್ನು ಮುಂದುವರೆಸಿದರು. ಪ್ರಸ್ತುತ ಗುಜರಾತ್ ರಾಜ್ಯದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಜೂನ್ 3, 2009ರಲ್ಲಿ ಎಲ್.ಕೆ.ಅಡ್ವಾಣಿಯವರಿಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. ಜೂನ್ 16, 2009ರಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮಕ್ಕೆ ಬದ್ಧರಾಗಿ ಬಿಜೆಪಿಯ ಜನರಲ್ ಸೆಕ್ರೆಟರಿ ಹುದ್ದೆಗೆ ರಾಜೀನಾಮೆ ನೀಡಿದರು.

Comments are closed.