ನವದೆಹಲಿ (ಆ.9): ದೆಹಲಿಯಲ್ಲಿ ಇತ್ತೀಚೆಗೆ ವ್ಯಕ್ತಿಯೋರ್ವ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದ. ಇದು ಆಕಸ್ಮಿಕ ಸಾವು ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತ್ತು. ಇದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಪೊಲೀಸರಿಗೆ ಗೊತ್ತಾಗಿತ್ತು.
ಪಶ್ಚಿಮ ದೆಹಲಿಯ ಪಂಜಾಬ್ ಭಾಗ್ ನಿವಾಸಿ ಶಕೀಲ್ ಅಹ್ಮದ್ ಮೃತ ವ್ಯಕ್ತಿ. ಸಂಸ್ಥೆಯೊಂದರಲ್ಲಿ ಈತ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಈತನ ಸಂಬಂಧಿ ನೌಶದ್ ಆಲಮ್ ಕೂಡ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಶಕೀಲ್ ಮೃತಪಟ್ಟಿದ್ದ. ಇಸ್ತ್ರಿ ಪೆಟ್ಟಿಗೆ ವೈಯರ್ ತಗುಲಿ ಆತ ಮೃತಪಟ್ಟಿದ್ದ ಎಂದು ನೌಶದ್ ಪೊಲೀಸರಿಗೆ ಹೇಳಿದ್ದ.
ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಏಟು ಬಿದ್ದಿರುವುದರಿಂದ ಶಕೀಲ್ ಮೃತಪಟ್ಟಿದ್ದ ಎಂದು ವರದಿ ಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಅನುಮಾನ ಕಾಡಿತ್ತು. ಹಾಗಾಗಿ ನೌಶದ್ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ನಿಜಾಂಶ ಬೆಳಕಿಗೆ ಬಂದಿದೆ.
ಹೆಂಡತಿ ಜೊತೆ ಶಕೀಲ್ ಸಂಬಂಧ ಹೊಂದಿರುವ ವಿಚಾರ ನೌಶದ್ಗೆ ಗೊತ್ತಾಗಿತ್ತು. ಈ ಬಗ್ಗೆ ಶಕೀಲ್ನಲ್ಲಿ ಕೇಳಿದ್ದರೆ ಆತ ಇದು ಸುಳ್ಳು ಎಂದು ವಾದಿಸಿದ್ದ. ಇದರಿಂದ ಕುಪಿತಗೊಂಡ ನೌಶದ್ ಸುತ್ತಿಗೆಯಿಂದ ಶಕೀಲ್ನನ್ನು ಹೊಡೆದು ಸಾಯಿಸಿದ್ದ. ನಂತರ ಸುಳ್ಳು ಕಥೆ ಕಟ್ಟಿದ್ದ.
Comments are closed.