ರಾಷ್ಟ್ರೀಯ

370ನೇ ವಿಧಿ, 35ಎ ರದ್ದತಿ ಜಮ್ಮು-ಕಾಶ್ಮೀರದಲ್ಲಿ ಮುಂದೇನಾಗಲಿದೆ

Pinterest LinkedIn Tumblr


ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ನೇ ವಿಧಿ ಹಾಗೂ ಲಡಾಖ್ ಗೆ ಕೇಂದ್ರಾಡಳಿತದ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದು ಮಾಡಿರುವ ಬಗ್ಗೆ ಸೋಮವಾರ ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದರು.

ಸುಗ್ರೀವಾಜ್ಞೆ ಮೂಲಕ ಅಂಗೀಕಾರ..ಮುಂದೇನು?

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ, 35ಎ ವಿಧಿಯನ್ನು ಹಾಗೂ ಲಡಾಖ್ ಗೆ ಕೇಂದ್ರಾಡಳಿತ ಸ್ಥಾನಮಾನ ನೀಡುವ ಶಿಫಾರಸಿಗೆ ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಇದೀಗ ಈ ಅಂಗೀಕಾರ ಆರು ತಿಂಗಳ ಕಾಲ ಜಾರಿಯಲ್ಲಿರಲಿದ್ದು, ಆರು ತಿಂಗಳೊಳಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸುವ ಮೂಲಕ ಅಂತಿಮ ಅಂಕಿತ ಪಡೆಯಬೇಕಾಗಿದೆ. ಹಾಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬಹುಮತ ಇರುವುದರಿಂದ ಈ ವಿಧೇಯಕ ಅಂಗೀಕಾರಗೊಳ್ಳುವುದು ಖಚಿತವಾಗಿದೆ.

370ನೇ ವಿಧಿ, 35ಎ ರದ್ದತಿ ಜಮ್ಮು-ಕಾಶ್ಮೀರದಲ್ಲಿ ಮುಂದೇನಾಗಲಿದೆ:

*ಜಮ್ಮು-ಕಾಶ್ಮೀರದಲ್ಲಿ ಇನ್ಮುಂದೆ ಹೊರಗಿನ ಜನರು ಕೂಡಾ ಭೂಮಿ ಖರೀದಿಸಬಹುದು.

*ಬೇರೆ ರಾಜ್ಯದವರು ಬಂದು ವಾಸಿಸುವುದರಿಂದ ಕಣಿವೆ ರಾಜ್ಯದಲ್ಲಿರುವ ಭಯೋತ್ಪಾದಕರಿಗೆ ಹೊರ ರಾಜ್ಯದವರು ಬೆಂಬಲ ಕೊಡಲ್ಲ

*ಜಮ್ಮು-ಕಾಶ್ಮೀರಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರಲಿದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ.

*ಜಮ್ಮು ಕಾಶ್ಮೀರಕ್ಕೆ ರಾಜ್ಯದ ಯಾವುದೇ ವಿಶೇಷ ಸ್ಥಾನಮಾನ ಇರುವುದಿಲ್ಲ.

*ಭದ್ರತೆಯನ್ನು ಕೇಂದ್ರವೇ ನೋಡಿಕೊಳ್ಳಲಿದೆ. ಕೈಗಾರಿಕೆ, ಉದ್ಯಮಗಳು ಜಮ್ಮು-ಕಾಶ್ಮೀರದಲ್ಲಿ ತಲೆ ಎತ್ತಲಿದೆ.

*ಜಮ್ಮು-ಕಾಶ್ಮೀರದ ವಿಧಾನಸಭೆ ಅವಧಿ 6ವರ್ಷದಿಂದ 5ವರ್ಷಕ್ಕೆಇಳಿಕೆ

*ಇನ್ಮುಂದೆ ದೇಶಕ್ಕೆ ಕೇಂದ್ರ ಸರಕಾರ ರೂಪಿಸಿದ ಕಾನೂನು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗಲಿದೆ.

*ಜಮ್ಮು-ಕಾಶ್ಮೀರದಲ್ಲಿ ಅಕ್ಟೋಬರ್ ನಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲು ಕೇಂದ್ರದ ಸಿದ್ಧತೆ.

ಲಡಾಖ್ ಕೇಂದ್ರಾಡಳಿತ ಪ್ರದೇಶ..ವಿಧಾನಸಭೆ ಇರಲ್ಲ:

ಪಿಟಿಐ ವರದಿ ಪ್ರಕಾರ, ಜಮ್ಮು-ಕಾಶ್ಮೀರದ ರಾಜ್ಯದಲ್ಲಿದ್ದ ಲಡಾಖ್ ಇನ್ಮುಂದೆ ಸ್ವತಂತ್ರವಾಗಲಿದೆ. ಅಲ್ಲದೇ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಹೊರಹೊಮ್ಮಲಿದೆ. ಜಮ್ಮು-ಕಾಶ್ಮೀರ ಆಡಳಿತದಿಂದ ಪ್ರತ್ಯೇಕವಾಗಿ ಲಡಾಖ್ ನಲ್ಲಿ ಆಡಳಿತ ನಡೆಯಲಿದೆ. ಅಲ್ಲದೇ ಲಡಾಖ್ ನಲ್ಲಿ ಪ್ರತ್ಯೇಕವಾದ ಡಿವಿಷನಲ್ ಕಮಿಷನರ್ ಹಾಗೂ ಇನ್ಸ್ ಪೆಕ್ಟರ್ ಜನರಲ್ ನೇಮಕಗೊಳ್ಳಲಿದ್ದಾರೆ. ಅಷ್ಟೇ ಅಲ್ಲ ಕಂದಾಯ ಸೇರಿದಂತೆ ವಿವಿಧ ಪೂರ್ಣ ಪ್ರಮಾಣದ ಆಡಳಿತ ಕೇಂದ್ರದಿಂದ ನಡೆಯಲಿದೆ.

ಲಡಾಖ್ ನಲ್ಲಿ ಯಾವುದೇ ವಿಧಾನಸಭೆ ಇಲ್ಲದೆ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯಲಿದೆ ಎಂದು ಶಾ ಸ್ಪಷ್ಟಪಡಿಸಿದ್ದರು. ದೇಶದಲ್ಲಿರುವ ಅಂಡಮಾನ್ ನಿಕೋಬಾರ್ ದ್ವೀಪ, ಚಂಡೀಗಢ್, ದಾದ್ರಾ ಮತ್ತು ನಗೇರ್ ಹವೇಲಿ, ದಮಾನ್ ಮತ್ತು ದಿಯು, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶವಾಗಿತ್ತು. ಆದರೆ ಇಲ್ಲಿ ಯಾವುದೇ ವಿಧಾನಸಭೆ ಇಲ್ಲ.

ಲಡಾಖ್ ಜನರ ಬಹುವರ್ಷಗಳ ಬೇಡಿಕೆ ಈಡೇರಿಕೆ:

ಜಮ್ಮು-ಕಾಶ್ಮೀರದಿಂದ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂಬ ಕೂಗು ತುಂಬಾ ಹಳೆಯದು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವಂತೆ ಮನವಿಯನ್ನು ಕೊಟ್ಟಿದ್ದರು.

ಲಡಾಖ್ ಜನತೆ ಯಾವಾಗಲೂ ದೇಶದ ಒಗ್ಗಟ್ಟು ಮತ್ತು ಸಮಗ್ರತೆಯ ಜೊತೆಗೆ ಇರಲು ಬಯಸುತ್ತೇವೆ. ನಾವು ಯಾವಾಗಲೂ ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಮನವಿಯಲ್ಲಿ ಲಡಾಖ್ ಮುಖಂಡರು ತಿಳಿಸಿದ್ದರು.

ಕ್ರಿ.ಶ 930ರಲ್ಲಿ ಲಡಾಖ್ ಸ್ವತಂತ್ರವಾಗಿತ್ತು:

ರಾಜಕೀಯ ಇತಿಹಾಸದ ಪುಟಗಳಲ್ಲಿ ಲಡಾಖ್ ಕ್ರಿ.ಶ 930ರಲ್ಲಿ ಸ್ವತಂತ್ರವಾಗಿತ್ತು. ಲಡಾಖ್ ಪ್ರಾಂತ್ಯದ ಮೊದಲ ರಾಜ ಸ್ಕಿಯಲ್ ದೆ ನಿಮಗೊನ್ ಕ್ರಿ.ಶಕ 843ರಲ್ಲಿ ಲಾಚೆನ್ ರಾಜವಂಶಕ್ಕೆ ನಾಂದಿ ಹಾಡಿದ್ದ. ಅದೇ ಸಂತತಿಯ ನಿಮಗೊನ್(975-990) ಕಾಲದಲ್ಲಿ ಲಡಾಖ್ ವಿಸ್ತಾರಗೊಂಡು ಅಭ್ಯುದಯವಾಗಿತ್ತು. ಲೆಹ್ ಗೆ 15 ಕಿಲೋ ಮೀಟರ್ ದೂರದಲ್ಲಿರುವ ಶೆಯ್ ಎಂಬಲ್ಲಿ ಆತ ಕಟ್ಟಿದ ಅರಮನೆ ಮತ್ತು ಕೋಟೆ ಇಂದಿಗೂ ಇದೆ. ಕ್ರಿಸ್ತಶಕ 1150ರ ಅವಧಿಯಲ್ಲಿ ಅನೇಕ ಅರಮನೆ, ಬೌದ್ಧ ವಿಹಾರಗಳನ್ನೂ ಕಟ್ಟಲಾಗಿತ್ತು.

Comments are closed.