ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಯಾದ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಸದ್ಯದಲ್ಲಿಯೇ ಅದು ಕಾನೂನು ಆಗಿ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.
ಬುಧವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಗೆಜೆಟ್ ನೋಟಿಫಿಕೇಷನ್ನಲ್ಲಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿರುವ ಸುದ್ದಿಯನ್ನು ಪ್ರಕಟಿಸಲಾಗಿದೆ. ಕೇಂದ್ರದ ಅಧಿಸೂಚನೆಯಾದ ತಕ್ಷಣದಿಂದ ಇದು ಕಾನೂನಾಗಿ ಬದಲಾವಣೆಯಾಗಲಿದೆ.
ಮುಸ್ಲಿಂ ಮಹಿಳೆ(ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಯು ದಿಢೀರ್ ತ್ರಿವಳಿ ತಲಾಕ್ ಅಥವಾ ತಲಾಕ್-ಎ-ಬಿದ್ದತ್ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ.
ಮಂಗಳವಾರ ಪ್ರತಿಪಕ್ಷಗಳ ಕೆಲ ಸದಸ್ಯರ ಕಲಾಪ ಬಹಿಷ್ಕಾರ ಹಾಗೂ ಗೈರಿನ ಲಾಭ ಪಡೆದ ಬಿಜೆಪಿ 99:84 ಮತದಲ್ಲಿ ಮುಸ್ಲಿಂ ಮಹಿಳಾ ಹಕ್ಕುಗಳ ಸುರಕ್ಷತೆ ವಿಧೇಯಕಕ್ಕೆ (ದಿಢೀರ್ ತ್ರಿವಳಿ ತಲಾಕ್ ನಿಷೇಧ) ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ ಮುಸ್ಲಿಂ ಮಹಿಳೆಯರ ನಾಲ್ಕೂವರೆ ದಶಕಗಳ ಹೋರಾಟ ಹಾಗೂ ಬಿಜೆಪಿ ಸರ್ಕಾರದ 3 ವರ್ಷಗಳ ನಿರಂತರ ಪ್ರಯತ್ನಕ್ಕೆ ಗೆಲುವು ದೊರೆಯಿತು.
ಈ ಮೂಲಕ ಸಾಮಾಜಿಕ ಅಸಮಾನತೆ, ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತುವುದು ಅಸಾಧ್ಯ ಎಂಬಂತಿದ್ದ 1970ರ ದಶಕದಲ್ಲಿ ತ್ರಿವಳಿ ತಲಾಕ್ ವಿರುದ್ಧ ಹಾಗೂ ಜೀವನಾಂಶಕ್ಕಾಗಿ ಶಾಹ ಬಾನೊ ನಡೆಸಿದ್ದ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ.
Comments are closed.