ಉತ್ತರ ಪ್ರದೇಶ: ದೇವರ ಹುಂಡಿಗೆ ಹೋದ ಹಣ ಮಸಾಣಕ್ಕೆ ಹೋದ ಹೆಣ ಎರಡು ಯಾವತ್ತೂ ವಾಪಸ್ ಬರಲ್ಲ ಅನ್ನೋ ಮಾತಿದೆ. ಆದ್ರೆ ಲಕ್ನೋದಲ್ಲಿ ಒಬ್ಬ ಯುವಕನನ್ನ ಡಾಕ್ಟರ್ಗಳೇ ಸತ್ತಿದ್ದಾನೆ ಅಂತಾ ಕನ್ಫರ್ಮ್ ಮಾಡಿದ ಮೇಲೆ ಹೂಳೋದಕ್ಕೆ ಮಸಣಕ್ಕೆ ತೆಗೆದುಕೊಂಡು ಹೋಗಿ, ಹೂಳುವ ವೇಳೆ ಆತ ಎಚ್ಚರಗೊಂಡಿದ್ದಾನೆ. ಇದೇ ತಿಂಗಳ 2 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಲಕ್ನೋದಲ್ಲಿ ಕಳೆದ ಜೂನ್ 21 ರಂದು 20 ವರ್ಷದ ಮೊಹಮದ್ ಫಾರ್ಖಾನ್ ಎಂಬಾತ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೋಮಾದಲ್ಲಿದ್ದ ಆತನ ಚಿಕಿತ್ಸೆಗಾಗಿ 7 ಲಕ್ಷವನ್ನೂ ಖರ್ಚು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸತ್ತಿದ್ದಾನೆ ಅಂತಾ ಡಾಕ್ಟರ್ಗಳೇ ದೃಢಪಡಿಸಿದ್ದಾರೆ.
ಇದ್ರಿಂದ ನೊಂದ ಕುಟುಂಬಸ್ಥರು ಆ್ಯಂಬುಲೆನ್ಸ್ನಲ್ಲಿ ಶವವನ್ನ ಆಸ್ಪತ್ರೆಯಿಂದ ಮೆನೆಗೆ ತಂದು ಅಂತಿಮ ದರ್ಶನದ ಬಳಿಕ ಮಸಣಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಅಂತಿಮ ಕಾರ್ಯಗಳನ್ನೆಲ್ಲಾ ಮುಗಿಸಿ ಹೂಳಲು ಗುಂಡಿಯೊಳಗೆ ಶವವನ್ನ ಇಡಬೇಕು ಎನ್ನುವಷ್ಟರಲ್ಲಿ ಶವದ ಕೈಕಾಲುಗಳ ಚಲನವಲನ ಕಂಡ ಕುಟುಂಬಸ್ಥರೊಬ್ಬರು ಗಮನಿಸಿದ್ದಾರೆ. ಆಗ ಯುವಕ ಫಾರ್ಖಾನ್ ಇನ್ನೂ ಬದುಕಿದ್ದಾನೆ ಎಂಬುದು ಗೊತ್ತಾಗಿ ತಕ್ಷಣವೇ ಆತನನ್ನ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಯುವಕ ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
Comments are closed.