ನವದೆಹಲಿ: ದಿಢೀರನೆ ಕರೆಂಟ್ ಬಿಲ್ ಹೆಚ್ಚಾಗಿ ಬರಲಾರಂಭಿಸಿದ್ದಕ್ಕೆ ಸೊಸೆಗೆ ಮಾವ ಬೈದಿದ್ದ. ಇದರಿಂದ ಸಿಟ್ಟಾದ ಆಕೆ, ವಿದ್ಯುತ್ ಉಳಿತಾಯದ ನೆಪದಲ್ಲಿ ಮಹಡಿ ಅಥವಾ ಅಡುಗೆಮನೆ, ಶೌಚಗೃಹದ ಬಲ್ಬ್ ತೆಗೆಯಲಾರಂಭಿಸಿದ್ದಳು. ಇದರಿಂದ ಸಿಟ್ಟಾದ ಮಾವ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿದ. ಬಳಿಕ ರಕ್ತಸಿಕ್ತ ಬಟ್ಟೆಯಲ್ಲೇ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾದ.
ಕೇಂದ್ರೀಯ ದೆಹಲಿಯ ಪೆಹರ್ಗಂಜ್ ನಿವಾಸಿ ನೀರಜಾ ದೇವಿ (32) ಹತ್ಯೆಯಾದಾಕೆ. ಭಗತ್ರಾಮ್ (65) ಕೊಲೆ ಮಾಡಿದವ. ಸೋಮವಾರ ರಾತ್ರಿ ನೀರಜಾ ದೇವಿ ಅಡುಗೆಮನೆಯ ಬಲ್ಬ್ ತೆಗೆದು ಹಾಕಿದ್ದಳು. ಇದರಿಂದಾಗಿ ಅತ್ತೆ-ಮಾವ ಹಾಗೂ ಆಕೆಯ ನಡುವೆ ಭಾರಿ ಜಗಳವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಭಗತ್ರಾಮ್ ಕೈಗೆ ಸಿಕ್ಕ ಚಾಕು ಹಿಡಿದು, ಸೊಸೆಯ ಕತ್ತು ಕೊಯ್ದು ಹಾಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ತನ್ನ ಪುತ್ರನನ್ನು ವಿವಾಹವಾಗಿ ಬಂದಾಗಿನಿಂದ ನೀರಜಾ ದೇವಿ ಒಂದಿಲ್ಲೊಂದು ವಿಚಾರಕ್ಕೆ ಆತನೊಂದಿಗೆ ಜಗಳವಾಡುತ್ತಿದ್ದಳು. ಆತ ಹೊರಹೋದ ಬಳಿಕ ತನ್ನ ಪತ್ನಿ ಹುಕುಂ ದೇವಿ ಹಾಗೂ ತನ್ನೊಂದಿಗೆ ಜಗಳ ಮುಂದುವರಿಸುತ್ಗತಿದ್ದಳು. ಕೆಲದಿನಗಳ ಹಿಂದೆ ವಿದ್ಯುತ್ ಬಿಲ್ ಹೆಚ್ಚಾಗಿ ಬಂದಿದ್ದಕ್ಕೆ ಆಕೆಯನ್ನು ಬೈದಿದ್ದೆ. ಈ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದ ಆಕೆ, ಮಹಡಿಯ ಮೆಟ್ಟಿಲುಗಳ ಬಳಿ ಅಳವಡಿಸಿದ್ದ ಬಲ್ಬ್, ಅಡುಗೆಮನೆಯ ಬಲ್ಬ್ಗಳನ್ನು ತೆಗೆದುಹಾಕುತ್ತಿದ್ದಳು. ಕೇಳಿದರೆ, ವಿದ್ಯುತ್ ಉಳಿಸಲು ಹೀಗೆ ಮಾಡುತ್ತಿರುವುದಾಗಿ ವ್ಯಂಗ್ಯವಾಡುತ್ತಿದ್ದಳು ಎಂದು ವಿಚಾರಣೆ ವೇಳೆ ಭಗತ್ರಾಮ್ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇದೇ ವೇಳೆ ಹತ ನೀರಜಾ ದೇವಿಯ ಕುಟುಂಬಸ್ಥರು ನೀರಜಾ ದೇವಿ ಮೇಲೆ ಭಗತ್ರಾಮ್ ಮತ್ತು ಆತನ ಪತ್ನಿ ಹುಕುಂ ದೇವಿ ಕೌಟುಂಬಿಕ ದೌರ್ಜನ್ಯ ಎಸಗುತ್ತಿದ್ದರು. ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ, ದೂರು ದಾಖಲಿಸಿದ್ದಾರೆ.
Comments are closed.