
ನವ ದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ಹಗರಣಗಳಲ್ಲಿ ಸಿಲುಕಿದ್ದ ಸುಮಾರು 12 ಜನ ಹಿರಿಯ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೆ ಒತ್ತಾಯಿಸಿದ ಬೆನ್ನಲ್ಲೆ ಇದೀಗ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಇಲಾಖೆಯ 15 ಜನ ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಗೇಟ್ ಪಾಸ್ ನೀಡಲು ಮುಂದಾಗಿದೆ.
ಪ್ರಧಾನ ಆಯುಕ್ತ ಅನೂಪ್ ಶ್ರೀವಾಸ್ತವ ಹಾಗೂ ಆಯುಕ್ತ ಅತುಲ್ ದೀಕ್ಷಿತ್ ಸೇರಿದಂತೆ ವಿವಿಧ ಹಗರಣಗಳಲ್ಲಿ ಸಿಲುಕಿರುವ ಒಟ್ಟು 15 ಜನ ಅಧಿಕಾರಿಗಳಿಗೆ ಸಾಮಾನ್ಯ ಹಣಕಾಸು ಅಧಿನಿಯಮ 56 ರ ಅನ್ವಯ ಕಡ್ಡಾಯ ನಿವೃತ್ತಿ ಪಡೆಯುವಂತೆ ಹಣಕಾಸು ಸಚಿವಾಲಯ ಈಗಾಗಲೇ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಕಡ್ಡಾಯ ನಿವೃತ್ತಿಗೆ ಸೂಚಿಸಲಾಗಿರುವ 15 ಜನರ ಪೈಕಿ 11 ಜನ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ. ಪ್ರಕರಣ ಎದುರಿಸುತ್ತಿರುವ ಎಲ್ಲರೂ ಉನ್ನತ ಪದವಿಯ ಅಧಿಕಾರಿಗಳೇ ಇದ್ದು, ಸಾಮಾನ್ಯವಾಗಿ ಈ ಎಲ್ಲರ ವಿರುದ್ಧವೂ ಹಣ ದುರುಪಯೋಗ ಹಾಗೂ ಹಗರಣ ಸಂಬಂಧ ಪ್ರಕರಣಗಳೇ ದಾಖಲಾಗಿರುವುದು ಉಲ್ಲೇಖಾರ್ಹ.
ಇಲಾಖೆಯ ಆಯುಕ್ತ ಅತುಲ್ ದೀಕ್ಷಿತ್ ವಿರುದ್ಧ ಸಿಬಿಐ ನಲ್ಲಿ ವಂಚನೆ ಮತ್ತು ಆದಾಯ ಮೀರಿದ ಆಸ್ತಿ ಗಳಿಕೆ ಸಂಬಂಧ ಎರಡು ಪ್ರಕರಣಗಳು ದಾಖಲಾಗಿವೆ.
ಕಡ್ಡಾಯ ನಿವೃತ್ತಿಗೆ ಒತ್ತಾಯಿಸಲ್ಪಟ್ಟಿರುವ ಉಳಿದ 12 ಜನ ಅಧಿಕಾರಿಗಳೆಂದರೆ, ಸಂಸಾರ್ ಚಾಂದ್, ಜಿ. ಶ್ರೀಹರ್ಷ, ವಿನಯ್ ಬ್ರಿಜ್ ಸಿಂಗ್, ಅಶೋಕ್ ಆರ್ ಮಹಿದಾ, ವಿರೇಂದ್ರಕರ್ ಅಗರ್ವಾಲ್, ಅಮರೀಶ್ ಜೈನ್, ನಳಿನ್ ಕುಮಾರ್, ಎಸ್.ಎಸ್. ಬಿಸ್ಟ್, ವಿನೋದ್ ಕುಮಾರ್ ಸಂಗ, ರಾಜು ಸೇಕರ್, ಅಶೋಕ್ ಕುಮಾರ್ ಅಸ್ವಲ್, ಮೊಹಮದ್ ಅಲ್ತಾಫ್ .
ಕೇಂದ್ರ ನಾಗರೀಕ ಸೇವೆ 1972 ಹಾಗೂ ಸಾಮಾನ್ಯ ಹಣಕಾಸು ನಿಯಮ 56ರ ಅನ್ವಯ 50 ರಿಂದ 55 ವರ್ಷ ದಾಟಿದ ಅಥವಾ 30 ವರ್ಷಕ್ಕೂ ಹೆಚ್ಚು ಕಾಲ ಸರ್ಕಾರಿ ಸೇವೆ ಸಲ್ಲಿಸಿದವರಿಗೆ ಕಡ್ಡಾಯವಾಗಿ ನಿವೃತ್ತಿ ನೀಡುವ ಅಧಿಕಾರ ಸರ್ಕಾರಕ್ಕಿದೆ. ಈ ಹಿಂದೆಯೂ ಐಎಎಸ್ ಅಧಿಕಾರಿಗಳಾದ ಎಂ.ಎನ್. ವಿಜಯಕುಮಾರ್, ಕೆ. ನರಸಿಂಹನ್ ಹಾಗೂ ಐಪಿಎಸ್ ಅಧಿಕಾರಿಗಳಾದ ಮಾಯಾಂಹ್ ಶೀಲ್ ಚೌವ್ಹಾನ್ ಹಾಗೂ ರಾಜ್ ಕುಮಾರ್ ದೇವಂಗನ್ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು.
Comments are closed.