ರಾಷ್ಟ್ರೀಯ

10,000ಕ್ಕಾಗಿ ಅಪ್ಪನ ಜೊತೆ ಜಗಳ – 2 ವರ್ಷದ ಹೆಣ್ಮಗಳ ಬರ್ಬರ ಹತ್ಯೆ

Pinterest LinkedIn Tumblr


ನವದೆಹಲಿ: ಅಲಿಘರ್ ಜಿಲ್ಲೆಯಲ್ಲಿ 2 ವರ್ಷದ ಹೆಣ್ಣು ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಜಿಲ್ಲೆಯ ತಪ್ಪಲ್ ಪ್ರದೇಶದಲ್ಲಿ ಈ ಘಟನೆ ನೆಡೆದಿದೆ. ಮೇ 31ರಂದು ತಮ್ಮ 2 ವರ್ಷದ ಹೆಣ್ಣು ಮಗು ನಾಪತ್ತೆಯಾಗಿದೆ ಎಂದು ಪೋಷಕರು ಪ್ರಕರಣ ದಾಖಲಿಸಿದ್ದರು. ದಾಖಲಾದ ಎರಡೇ ದಿನಗಳಲ್ಲಿ ಬೀದಿ ನಾಯಿಗಳು ಹೆಣ್ಣು ಮಗುವಿನ ದೇಹವನ್ನು ಹಿಡಿದು ತಂದಿದ್ದು ಭಯಾನಕ ಕೃತ್ಯ ಹೊರಬರಲು ಕಾರಣವಾಗಿದೆ. ಮನೆಯ ಸಮೀಪವೇ ಇರುವ ಕಸದ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ತಂದೆ ಆರೋಪಿಗಳಾದ ಜಾವಿದ್ ಮತ್ತು ಅಸ್ಲಾಮ್ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ 10 ಸಾವಿರ ರೂ. ಹಣವನ್ನು ಮರುಪಾವತಿ ಮಾಡಿರಲಿಲ್ಲ. ಈ ಕಾರಣದಿಂದ ಮಗುವನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣವನ್ನು ರಾಷ್ಟೀಯ ಭದ್ರತಾ ಕಾಯಿದೆ ಅಡಿಯಲ್ಲಿ ತನಿಖೆ ನಡೆಸಲಾಗುವುದು ಮತ್ತು ಪ್ರಕರಣದಲ್ಲಿ ನಿರ್ಲಕ್ಷ್ಯತೆ ತೋರಿದ ಐವರು ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.

ಮಗುವಿನ ಮೇಲೆ ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಯಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಆದರೆ ಹತ್ಯೆ ಮಾಡುವ ಮೊದಲು ಮಗುವಿಗೆ ಚಿತ್ರಹಿಂಸೆ ಕೊಡಲಾಗಿದೆ. ಮಗುವಿನ ಕಣ್ಣುಗಳನ್ನು ಕೀಳಲಾಗಿದ್ದು, ಕಾಲುಗಳೂ ಸಹ ಮುರಿದಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೋಷಕರು ನಾಪತ್ತೆ ಪ್ರಕರಣವನ್ನು ದಾಖಲಿಸಿದಾಗ ಪೊಲೀಸರು ಅಪಹರಣ ಎಂದು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಮಗುವಿನ ತಂದೆ, ನನ್ನ ಮತ್ತು ಜಾವಿದ್ ಅಸ್ಲಾಮ್ ನಡುವೆ ಹಣದ ವಿಷಯಕ್ಕೆ ತಕರಾರು ಇತ್ತು ಎಂದು ತಿಳಿಸಿದ ತಕ್ಷಣ ನಾವು ಅವರಿಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆವು. ವಿಚಾರಣೆಯಲ್ಲಿ ಮಗುವನ್ನು ಹತ್ಯೆ ಮಾಡಿ, ದೇಹವನ್ನು ಅಸ್ಲಾಮ್ ಮನೆಯಲ್ಲಿ ಬಚ್ಚಿಡಲಾಗಿತ್ತು ಎಂದು ತನ್ನ ತ್ಪಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಮಗುವಿನ ಸಂಬಂಧಿಕರು ಮತ್ತು ಪೋಷಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳ ಜೊತೆ ಅವರ ಮನೆಯ ಸದಸ್ಯರನ್ನು ಕೂಡ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಯ ಕೃತ್ಯವನ್ನು ಜನರು ಕಟುವಾಗಿ ಟೀಕಿಸುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

Comments are closed.