ನವದೆಹಲಿ: ಪ್ರೀತಿಯನ್ನು ಮಹಿಳೆ ತಿರಸ್ಕರಿಸಿದ್ದಕ್ಕೆ ಸಿಟ್ಟಾದ ವ್ಯಕ್ತಿಯೊಬ್ಬ ಸೇಡಿಗಾಗಿ 9 ವರ್ಷ ಮಗಳನ್ನು ಅಪಹರಣಗೈದ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿಯನ್ನು 28 ವರ್ಷದ ಕಮಲೇಶ್ ಎಂದು ಗುರುತಿಸಲಾಗಿದೆ. ಪತಿಯಿಂದ ದೂರವಾಗಿರುವ ಮಹಿಳೆ ತಾನೇ ದುಡಿದುಕೊಂಡು ಮೂವರು ಹೆಣ್ಣು ಮಕ್ಕಳು ಮತ್ತು ಮಗನನ್ನು ಸಾಕುತ್ತಿದ್ದಾಳೆ.
ಮೂರು ತಿಂಗಳ ಹಿಂದೆ ಮಹಿಳೆ ಕಮಲೇಶ್ ನನ್ನು ಭೇಟಿಯಾಗಿದ್ದರು. ತಮ್ಮ ರೂಮ್ನ ಮೇಲ್ಛಾವಣಿ ರಿಪೇರಿ ಮಾಡಿಸಲು ಕಮಲೇಶ್ನನ್ನು ಮಹಿಳೆ ಕೆಲಸಕ್ಕೆ ಕರೆದಿದ್ದರು. ಹೀಗೆ ಕೆಲವು ಬಾರಿ ಭೇಟಿಯ ಬಳಿಕ ಆತನಿಗೆ ಮಹಿಳೆ ಮೇಲೆ ಪ್ರೀತಿ ಹುಟ್ಟಿದೆ. ಈ ಬಗ್ಗೆ ಮಹಿಳೆಗೆ ಕಮಲೇಶ್ ತಿಳಿಸಿ, ಮದುವೆಯಾಗೋಣ ಎಂದಾಗ ಆಕೆ ನಿರಾಕರಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಕಮಲೇಶ್ ಹೇಗಾದರೂ ಮಹಿಳೆಯನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದಾನೆ. ಆಗ ಆಕೆಯ ಮಗಳನ್ನು ಅಪಹರಿಸಿ, ಹೆದರಿಸಿ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದನು. ಭಾನುವಾರ ಅಂಗಡಿಗೆ ಬಾಲಕಿ ಹೋದಾಗ ಆಕೆಯನ್ನು ಆರೋಪಿ ಅಪಹರಿಸಿ ಉತ್ತರ ಪ್ರದೇಶಕ್ಕೆ ಕರೆದೋಯ್ದಿದ್ದಾನೆ. ಆದರೆ ಅಂಗಡಿಗೆ ಹೋದ ಮಗಳು ವಾಪಸ್ ಬಾರದೇ ಇದ್ದಾಗ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಪೊಲೀಸರು ತನಿಖೆಗೆ ಇಳಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ದೆಹಲಿಯಿಂದ ಉತ್ತರ ಪ್ರದೇಶಶಕ್ಕೆ ಬಾಲಕಿಯನ್ನು ಆರೋಪಿ ರೈಲಿನಲ್ಲಿ ಕರೆದೋಯ್ಯುತ್ತಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಯುಪಿ ಪೊಲೀಸರಿಗೆ ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರ ಸಹಾಯದಿಂದ ಆರೋಪಿಯನ್ನು ಯಶಸ್ವಿಯಾಗಿ ಸೆರೆಹಿಡಿದು, ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ.
Comments are closed.