ರಾಷ್ಟ್ರೀಯ

ಚೌಕಿದಾರನಿಗೆ ಮತದಾರರ ಪ್ರೀತಿ: ದೇಶಾದ್ಯಂತ ನಮೋ ಸುನಾಮಿ

Pinterest LinkedIn Tumblr


ನವದೆಹಲಿ: ಪ್ರಧಾನಿ ಮೋದಿ ಅವರು ಮತ್ತೆ ತ್ರಿವಿಕ್ರಮ ಮೆರೆದಿದ್ದಾರೆ. 1957ರ ಬಳಿಕ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಎರಡನೇ ಬಾರಿಗೆ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೊದಲ ಪಕ್ಷ ಎಂಬ ಹೆಗ್ಗಳಿಕೆ ಬಿಜೆಪಿಯದ್ದಾಗಿದ್ದರೆ ಅದರ ಘನತೆ ಮೋದಿಗೆ ಸೇರುತ್ತೆ.

ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ವಾಗ್ದಾನದಂತೆ ಎಕ್ಸಿಟ್ ಪೋಲ್‍ಗಳ ಸರ್ವೆಗಳಂತೆಯೇ ಓಟ್ ಶೇರ್‌ನಲ್ಲಿ ಶೇ. 10ರಷ್ಟು ಹೆಚ್ಚಳ ಕಾಣುವುದರ ಜೊತೆಗೆ 300ಕ್ಕೂ ಅಧಿಕ ಸೀಟ್‍ಗಳನ್ನು ಎನ್‍ಡಿಎ ಕೂಟ ತನ್ನದಾಗಿಸಿಕೊಂಡಿದೆ.

ದೆಹಲಿ, ಗುಜರಾತ್, ಹರ್ಯಾಣ, ಉತ್ತರಾಖಂಡ್, ಹಿಮಾಚಲ, ತ್ರಿಪುರಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ, ಕಾಂಗ್ರೆಸ್, ಮಹಾಘಟ ಬಂಧನ್ ನಾಯಕರ `ಪ್ರಧಾನಿ ಹುದ್ದೆ’ಯ ಕನಸನ್ನು ಭಂಗಗೊಳಿಸಿದ್ದಾರೆ. ಎಲ್ಲಾ ಸಚಿವರ ರಾಜೀನಾಮೆಗೆ ಸೂಚಿಸಲಾಗಿದ್ದು, ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡಲಾಗಿದೆ.

ಇದೇ 29ಕ್ಕೆ ಮೋದಿ ಪ್ರಮಾಣವಚನ ಸ್ವೀಕರಿಸೋ ಮೂಲಕ ನಮೋ 2.0 ಯುಗ ಆರಂಭವಾಗಲಿದೆ. ಸಂಜೆ ಬಿಜೆಪಿಯ ಪ್ರಧಾನ ಕಚೇರಿಗೆ ಬಂದ ಮೋದಿಗೆ ಹೂಮಳೆ ಸುರಿಸಲಾಯಿತು. ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಮೋದಿ, ದೇಶದ ಅಭಿವೃದ್ಧಿಗೆ ಒಟ್ಟಾಗಿ ಹೋಗೋಣ ಅಂತ ಕರೆ ನೀಡಿದ್ರು. ಹೀನಾಯ ಸೋಲಿನ ನೈತಿಕ ಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ. ಈ ಮಧ್ಯೆ, ಮೋದಿ ಅವರಿಗೆ ಮಿತ್ರ ಪಕ್ಷಗಳ ನಾಯಕರು ಮಾತ್ರ ಅಲ್ಲ. ಪಾಕಿಸ್ತಾನ, ಶ್ರೀಲಂಕಾ, ಅಪಘಾನಿಸ್ಥಾನ, ಇಸ್ರೇಲ್, ಜಪಾನ್ ಶುಭಕೋರಿವೆ.

ಯಾರಿಗೆ ಎಷ್ಟು ಸ್ಥಾನ?
ಒಟ್ಟು 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಸರಳ ಬಹುಮತಕ್ಕೆ 272 ಸ್ಥಾನ ಬೇಕು. ಈ ಬಾರಿ ಚುನಾವಣೆಯಲ್ಲಿ ಎನ್‍ಡಿಎ 349, ಯುಪಿಎ 86, ಮಹಾಮೈತ್ರಿ 17, ಇತರೆ 90 ಸ್ಥಾನಗಳನ್ನು ಗೆದ್ದುಕೊಂಡಿದೆ. 436 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 303 ರಲ್ಲಿ ಗೆದ್ದರೆ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 49ರಲ್ಲಿ ಗೆಲುವು ಸಾಧಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ್, ಜಾರ್ಖಂಡ್, ಛತ್ತೀಸ್‍ಗಢ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ತ್ರಿಪುರಾ, ನಾಗಾಲ್ಯಾಂಡ್, ದಿಯು ದಾಮನ್, ಸಿಕ್ಕಿಂ, ಮಿಜೋರಾಂನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.

ಕಾಂಗ್ರೆಸ್ ಶೂನ್ಯ ಸಾಧನೆ:
ಗುಜರಾತ್, ಹರಿಯಾಣ, ದೆಹಲಿ, ರಾಜಸ್ಥಾನ, ಜಮ್ಮುಕಾಶ್ಮೀರ, ಒಡಿಶಾ, ತಮಿಳುನಾಡು, ಅಸ್ಸಾಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಚಂಡೀಗಢ, ದಾದ್ರಾ ನಗರ್ ಹವೇಲಿ, ಡೀಯು ದಮನ್, ಲಕ್ಷದ್ವೀಪ, ತ್ರಿಪುರ, ಅಂಡಮಾನ್ ನಿಕೋಬಾರ್ ನಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.

ಮೋದಿಗೆ ಮತ್ತೆ ಮಣೆ ಹಾಕಲು ಕಾರಣಗಳು..?
* ಏಕಪಕ್ಷದಿಂದ ಸ್ಥಿರ ಸರ್ಕಾರ, ಆಡಳಿತ ಎಂಬ ನಂಬಿಕೆ (ಆಧಾರ್, ಜನಧನ, ಆಯುಷ್ಮಾನ್ ಭಾರತ್ ಯೋಜನೆಗಳು. ನೋಟ್ ಬ್ಯಾನ್)
* ದೇಶದ ರಕ್ಷಣೆ, ರಾಷ್ಟ್ರೀಯತೆಯ ಅಜೆಂಡಾ (ಸರ್ಜಿಕಲ್ ಸ್ಟ್ರೈಕ್, ಏರ್‍ಸ್ಟ್ರೈಕ್, ಸೇನೆಯ ಬಲವರ್ಧನೆ)
* ಫಲಿಸಿದ `ಮೇ ಭೀ ಚೌಕಿದಾರ್’ ಕ್ಯಾಂಪೇನ್ (ರಾಹುಲ್ ಚೌಕಿದಾರ್ ಚೋರ್ ವಿರುದ್ಧ ಮೊಳಗಿದ್ದ ಚೌಕಿದಾರ್ ಕ್ಯಾಂಪೇನ್)
* ಪ್ರಣಾಳಿಕೆಯಲ್ಲಿ ರೈತರಿಗೆ ಕನಿಷ್ಠ ಸಾರ್ವತ್ರಿಕ ಆದಾಯದ ಭರವಸೆ
* ಮೋದಿಗೆ ದೇಶದಲ್ಲಿ ಪ್ರಬಲ ಪೈಪೋಟಿ ಇಲ್ಲದೆ ಇರೋದು (ರಾಹುಲ್‍ಗೆ ಅನುಭವ ಇಲ್ಲ. ನಾಯ್ಡು, ಮಮತಾ, ಮಾಯ, ಕೆಸಿಆರ್ ವರ್ಚಸ್ಸು ಇಲ್ಲ)

`ತ್ರಿವಿಕ್ರಮ’ ಮೋದಿ.. ಮುಂದೇನು..?
* ಜನಪರ ಯೋಜನೆಗಳ ತ್ವರಿತ ಅನುಷ್ಠಾನ
* ದೇಶದ ಆರ್ಥಿಕ ಸುಧಾರಣೆಗೆ ವೇಗ
* ಸಣ್ಣ ಕೃಷಿಕರಿಗೆ ಆರ್ಥಿಕ ನೆರವು
* ಕಾಂಗ್ರೆಸ್ ಮತ್ತೆ ಚೇತರಿಸಿಕೊಳ್ಳೋದು ಕಷ್ಟ
* ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ಅಪಾಯ

Comments are closed.