ರಾಷ್ಟ್ರೀಯ

ಬಿಜೆಪಿ ಬೇರೂರಿದ ಲಖನೌನಲ್ಲಿ ರಾಜ್​ನಾಥ್​ ಸಿಂಗ್​ ಗೆ ಜಯ

Pinterest LinkedIn Tumblr


ಲೊಕಸಭಾ ಚುನಾವಣೆಯಲ್ಲಿ ಲಖನೌ ಕ್ಷೇತ್ರ ಬಹಳ ಮಹತ್ವದ ಪಾತ್ರವಹಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕಲ್ಕಿ ಧಾಮನ್​ ಮುಖ್ಯಸ್ಥ ಆಚಾರ್ಯ ಪ್ರಮೋದ್​ ಕೃಷ್ಣಂ ಅವರು ಕಾಂಗ್ರೆಸ್​ನಿಂದ, ಬಿಎಸ್​ಪಿ-ಎಸ್​ಪಿ ಮೈತ್ರಿ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಕಣದಲ್ಲಿದ್ದಾರೆ. ರಾಜನಾಥ್​ ಸಿಂಗ್​ ಈ ಕ್ಷೇತ್ರದಲ್ಲಿ ಗೆಲ್ಲುವುದು ಬಹುತೇಕ ಖಚಿತ ಎನ್ನುತ್ತಿದೆ ಚುನಾವಣ ಪೂರ್ವ ಸಮೀಕ್ಷೆ.

ಲಖನೌ ಕ್ಷೇತ್ರವನ್ನು ಬಿಜೆಪಿ ಹಿರಿಯ ನಾಯಕ ಅಟಲ್​ಬಿಹಾರ್​ ವಾಜಪೇಯಿ ಅವರು ಐದು ಬಾರಿ ಪ್ರತಿನಿಧಿಸಿದ್ದರು. ಇದರ ಪ್ರಭಾವ ಈಗಲೂ ಇದೆ ಎಂಬುದು ರಾಜಕೀಯ ತಜ್ಞರ ಮಾತು. ಹಾಗಾಗಿ ರಾಜನಾಥ್​ ಸಿಂಗ್​ ಗೆಲುವಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

ಅಚ್ಚರಿ ಎಂದರೆ ರಾಜನಾಥ್​ ಸಿಂಗ್​ ನಾಮಪತ್ರ ಸಲ್ಲಿಕೆ ಮಾಡುವವರೆಗೂ ಲಖನೌ ಕ್ಷೇತ್ರದಲ್ಲಿ ವಿಪಕ್ಷಗಳಿಂದ ಯಾರು ಕಣಕ್ಕೆ ಇಳಿಯಲ್ಲಿದ್ದಾರೆ ಎನ್ನುವ ವಿಚಾರ ಗುಟ್ಟಾಗಿಯೇ ಇತ್ತು. ಲಖನೌನ ಧಾರ್ಮಿಕ ಕೇಂದ್ರಗಳಲ್ಲಿ ಕಲ್ಕಿ ಧಾಮನ್​ ಹೆಚ್ಚು ಪ್ರಭಾವ ಹೊಂದಿದೆ. ಹಾಗಾಗಿ ಅದರ ಮುಖ್ಯಸ್ಥನನ್ನು ಕಾಂಗ್ರೆಸ್​​ ಕಣಕ್ಕೆ ಇಳಿಸಿದೆ. ಧಾರ್ಮಿಕ ಪ್ರಭಾವ ಬಳಸಿಕೊಳ್ಳುವ ಮೂಲಕ ಮತ ಬ್ಯಾಂಕ್​ ಮೇಲೆ ಕಾಂಗ್ರೆಸ್​ ಕಣ್ಣಿಟ್ಟಿದೆ.

ರಾಜನಾಥ್​ ಸಿಂಗ್​ಗೆ ಪ್ರಬಲ ಪೈಪೋಟಿ ನೀಡಿ ಗೆಲ್ಲಲು ಎಲ್ಲರೂ ಒಂದಾಗಬೇಕು ಎಂಬುದು ಎಸ್​ಪಿ-ಬಿಎಸ್​ಪಿ ಮೈತ್ರಿಯ ಲೆಕ್ಕಾಚಾರವಾಗಿತ್ತು. ಆದರೆ, ಕಾಂಗ್ರೆಸ್ ಕೃಷ್ಣಂ ಅವರನ್ನು ಕಣಕ್ಕೆ ಇಳಿಸಿದ್ದಕ್ಕೆ ಎಸ್​​ಪಿ ಮುಖ್ಯಸ್ಥ ಅಖಿಲೇಶ್​ ಯಾದವ್ ಅಸಮಾಧಾನ ಹೊರ ಹಾಕಿದ್ದರು. ಈ ಮೂಲಕ ಅಖಿಲೇಶ್​ಗೆ ಇಲ್ಲಿ ಸೋಲಿನ ಸುಳಿವು ಸಿಕ್ಕಿದೆ ಎಂದು ಬಣ್ಣಿಸಲಾಗಿದೆ.

ಈ ಬಾರಿಯೂ ಈ ಕ್ಷೇತ್ರದಲ್ಲಿ ಕಮಲ ಅರಳಲಿದೆ ಎಂಬುದಕ್ಕೆ ಸಾಕಷ್ಟು ಪೂರಕ ಅಂಶಗಳಿವೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ತಲಾ ಏಳು ಗೆಲುವು ದಾಖಲಿಸಿವೆ. ಆದರೆ, ಬಿಜೆಪಿ ಕಳೆದ ಏಳು ಚುನಾವಣೆಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಭಾರೀ ಅಂತರಗಳ ಗೆಲುವು ಸಾಧಿಸಿದೆ. ಅಲ್ಲದೆ, ಕಮಲದ ಬೇರು ಈ ಭಾಗದಲ್ಲಿ ಆಳವಾಗಿ ಬೇರುರಿರುವುದರಿಂದ ಬಿಜೆಪಿ ಗೆಲ್ಲುವುದು ಬಹುತೇಕ ಖಚಿತ ಎಂದೇ ಬಣ್ಣಿಸಲಾಗುತ್ತಿದೆ.

ಕಳೆದ ಬಾರಿ ಮೋದಿ ಅಲೆಯಿಂದಾಗಿ ಒಟ್ಟು ಮತಗಳಲ್ಲಿ ರಾಜನಾಥ್​ ಸಿಂಗ್​ ಶೇ.54 ಮತ ಪಡೆದಿದ್ದರು. ಕಾಂಗ್ರೆಸ್​ ಅಭ್ಯರ್ಥಿ ರೀಟಾ ಬಹುಗಣ ಜೋಷಿ ವಿರುದ್ಧ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಅವರು ಗೆದ್ದು ಐದು ವರ್ಷಗಳಾಗಿದ್ದರೂ ರಾಜನಾಥ್​ ಸಿಂಗ್ ಬಗ್ಗೆ ಜನರ ಅಭಿಪ್ರಾಯ ಬದಲಾಗಿಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಹಾಗಾಗಿ ಅವರು ಈ ಬಾರಿ ಗೆಲ್ಲಲಿದ್ದಾರೆ ಎನ್ನಲಾಗುತ್ತಿದೆ.

ಈ ಬಾರಿ ಕಾಂಗ್ರೆಸ್​ ಧಾರ್ಮಿಕ ನಾಯಕನನ್ನು ಕಣಕ್ಕೆ ಇಳಿಸಿದೆ. ಹಾಗಾಗಿ, ಬಿಜೆಪಿಗೆ ಬೀಳುವ ಕೆಲ ಮತಗಳು ಕಾಂಗ್ರೆಸ್​ ಪಾಲಾಗುವ ಸಾಧ್ಯತೆ ಇದೆ. ರಾಜನಾಥ್​ ಸಿಂಗ್ ಗೆಲ್ಲವುದು ಖಚಿತ ಎನ್ನಲಾಗಿದ್ದು, ಮತಗಳ ಅಂತರ ಕಡಿಮೆ ಆಗಬಹುದು ಎನ್ನಲಾಗಿದೆ.

ಈ ಕ್ಷೇತ್ರದ ಇತಿಹಾಸ

1991ರಿಂದ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. ಒಮ್ಮೆ ಪಕ್ಷೇತರ ಹಾಗೂ ಒಮ್ಮೆ ಜನತಾ ದಳ, ಭಾರತೀಯ ಲೋಕ್​ ದಳ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಏಳು ಬಾರಿ ಬಿಜೆಪಿ ಏಳು ಬಾರಿ ಕಾಂಗ್ರೆಸ್​ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. 1991-2009ರವರೆಗೆ ಅಟಲ್​ ಬಿಹಾರಿ ವಾಜಪೇಯಿ ಈ ಕ್ಷೇತ್ರದ ಸಂಸದರಾಗಿದ್ದರು. 2009-14ರಲ್ಲಿ ಬಿಜೆಪಿಯ ಲಾಲ್​ ಜಿ ತಂಡನ್​ ಸಂಸದರಾದರು. 2014ರಲ್ಲಿ ರಾಜನಾಥ್​ ಇಲ್ಲಿ ಗೆಲುವು ಸಾಧಿಸಿದ್ದರು.

Comments are closed.