ರಾಷ್ಟ್ರೀಯ

ಗೋಡ್ಸೆ ಗಾಂಧಿಯ ದೇಹವನ್ನು ಕೊಂದರೆ ಪ್ರಗ್ಯಾ ಸಿಂಗ್ ರಂತಹವರು ಅವರ ಆತ್ಮವನ್ನೇ ಕೊಲ್ಲುತ್ತಿದ್ದಾರೆ: ಕೈಲಾಶ್ ಸತ್ಯಾರ್ಥಿ

Pinterest LinkedIn Tumblr

ನವದೆಹಲಿ: ನೋಬೆಲ್ ಶಾಂತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಡ್ಸೆ ಗಾಂಧಿಯ ದೇಹವನ್ನು ಕೊಂದರೆ ಪ್ರಗ್ಯಾ ಸಿಂಗ್ ರಂತಹವರು ಅವರ ಆತ್ಮವನ್ನೇ ಕೊಲ್ಲುತ್ತಿದ್ದಾರೆ ಎಂದು ಕೈಲಾಶ್ ಸತ್ಯಾರ್ಥಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರಗ್ಯಾ ಸಿಂಗ್ ಗೋಡ್ಸೆ ಬೆಂಬಲಕ್ಕೆ ನಿಲ್ಲುವ ಮೂಲಕ ಅಹಿಂಸೆ, ಶಾಂತಿ, ಸಹಿಷ್ಣುತೆಯನ್ನು ಹೊಂದಿರುವ ಬಾಪೂಜಿಯ ಆತ್ಮವನ್ನು ಕೊಲ್ಲುತ್ತಿದ್ದಾರೆ. ಗಾಂಧಿಜೀ ಅವರು ಅಧಿಕಾರ ಮತ್ತು ರಾಜಕೀಯಕ್ಕಿಂತಲೂ ಎತ್ತರದ ಸ್ಥಾನದಲ್ಲಿದ್ದಾರೆ. ಬಿಜೆಪಿ ರಾಜಕೀಯ ಲಾಭವನ್ನು ಬದಿಗಿರಿಸಿ ಅವರನ್ನು ಪಕ್ಷದಿಂದ ಹೊರಹಾಕಿ ರಾಜಧರ್ಮವನ್ನು ಪಾಲಿಸಬೇಕಾಗಿತ್ತು ಎಂದು ಕೈಲಾಶ್ ಸತ್ಯಾರ್ಥಿ ಕಿಡಿ ಕಾರಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಗ್ಯಾ ಸಿಂಗ್ ಠಾಕೂರ್, ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಉಳಿಯುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪ್ರಗ್ಯಾ ಸಿಂಗ್ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ಹೇಳಿಕೆಗೆ ಕ್ಷಮೆಯಾಚಿಸುವಂತೆಯೂ ಸೂಚಿಸಿತ್ತು. ಅದರಂತೆ ಪ್ರಗ್ಯಾ ಸಿಂಗ್ ಕ್ಷಮೆಯಾಚಿಸಿದ್ದಾರೆ.

Comments are closed.