
ಹಿಮ್ಮತ್ನಗರ: ವಧುವೇ ಇಲ್ಲದ ಅದ್ದೂರಿ ಮದುವೆಯೊಂದು ಗುಜರಾತಿನಲ್ಲಿ ನಡೆದಿದೆ. ಅಷ್ಟಕ್ಕೂ ನಡೆದಿದ್ದೇನು? ಮದುಮಗಳು ಓಡಿ ಹೋದಳೇ? ಇಲ್ಲ ಆ ಮದುವೆ ವಧುವಿಲ್ಲದೆ ನಿಶ್ಚಯವಾಗಿತ್ತು ಮತ್ತು ಹಾಗೆಯೇ ನಡೆಯಿತು. ಏನೀ ಅಸಂಬದ್ಧ ಎನ್ನುತ್ತೀರ?

ಅದೊಂದು ಮಾನವೀಯ ದೃಷ್ಟಿಕೋನದಲ್ಲಾದ ಮದುವೆ. 27 ವರ್ಷದ ವರ ಅಜಯ್ ಬರೋತ್ ಕಲಿಕಾ ಅಸಾಮರ್ಥ್ಯದಿಂದ ಬಳಲುತ್ತಿದ್ದು ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ. ಮಗನನ್ನು ಪ್ರೀತಿಯಿಂದ ಸಾಕಿದ್ದ ತಂದೆ ಆತನ ಸಂತೋಷಕ್ಕೆ ಏನನ್ನು ಬೇಕಾದರೂ ಮಾಡಲು ಸಿದ್ಧನಿದ್ದ. ಇತ್ತೀಚಿಗೆ ಅಜಯ್ ಸಹೋದರ ಸಂಬಂಧಿಯೊಬ್ಬರು ಅದ್ದೂರಿಯಾಗಿ ಮದುವೆಯಾಗಿದ್ದರು. ತನ್ನ ಮದುವೆಯೂ ಹೀಗೆಯೇ ನಡೆಯಬೇಕೆಂದು ಆತ ಸದಾ ತಂದೆಯಲ್ಲಿ ಹೇಳುತ್ತಿದ್ದ. ಮಾನಸಿಕ ಸಮಸ್ಯೆ ಹೊಂದಿರುವ ಮಗನ ಕನಸನ್ನು ಈಡೇರಿಸಲು ತಂದೆ ಸಿದ್ಧರಾದರು. ಕೇವಲ ಆತನ ಸಂತೋಷಕ್ಕಾಗಿ ಅದ್ದೂರಿ ಮದುವೆಯನ್ನು ಆಯೋಜಿಸಲು ನಿರ್ಧರಿಸಲಾಯಿತು. ಆದರೆ ಆತನಿಗೆ ಹೆಣ್ಣು ಕೊಡುವವರ್ಯಾರು? ಅದು ಸಾಧ್ಯವಿಲ್ಲದ ವಿಚಾರವೆಂದು ವಧುವೇ ಇಲ್ಲದೆ ಮದುವೆ ಮಾಡಲು ಅವರು ಯೋಚನೆ ಮಾಡಿದರು.

ಗುಜರಾತ್ ಸಂಪ್ರದಾಯದಂತೆ ಮದುವೆಯೂ ಸಂಪನ್ನವಾಯಿತು. ಮದುವೆಯ ಮುನ್ನಾದಿನ ಮೆಹಂದಿ, ಸಂಗೀತ ಕಾರ್ಯಕ್ರಮವನ್ನಿಟ್ಟುಕೊಳ್ಳಲಾಯಿತು. ಸಂಬಂಧಿಕರು, ಸ್ನೇಹಿತರ ಭಾರಿ ಸಂಖ್ಯೆಯಲ್ಲಿ ಅಂದು ಹಾಜರಿದ್ದರು.
ಮದುವೆಯ ದಿನ ಗೋಲ್ಡನ್ ಶೆರ್ವಾನಿ, ಸುಂದರವಾದ ಗುಲಾಬಿ ರುಮಾಲು, ಕೆಂಪು ಮತ್ತು ಬಿಳಿ ಗುಲಾಬಿ ಹೂಮಾಲೆ ಧರಿಸಿ ಅಜಯ್ ರಾಜಕುಮಾರನಂತೆ ಕಂಗೊಳಿಸಿದ್ದ. ಸಂಪ್ರದಾಯದಂತೆ ಕುದುರೆ ಏರಿ ದಿಬ್ಬಣದ ಜತೆಗೆ ಹೊರಟ. ಸುಮಾರು 200 ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ನೃತ್ಯ ಮಾಡುತ್ತ ಸಾಗಿದರು.
ಸುಮಾರು 800 ಜನರಿಗೆ ಮದುವೆಯ ಔತಣಕೂಟವನ್ನೇರ್ಪಡಿಸಲಾಗಿತ್ತು. ಅಂತೂ ಪ್ರೀತಿಯ ಮಗನಿಗೆ ಖುಷಿ ಪಡಿಸಿದ ಸಂತೋಷ ಅಪ್ಪನದಾಯಿತು.
Comments are closed.