ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೌಕಿದಾರ್ ಚೋರ್ ಹೈ’ ಎಂದು ಸುಪ್ರೀಂಕೋರ್ಟೇ ಹೇಳಿದೆ,” ಎನ್ನುವ ಮೂಲಕ ನ್ಯಾಯಾಲಯದ ಹೆಸರು ಬಳಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸರ್ವೋಚ್ಚ ನ್ಯಾಯಾಲಯಕ್ಕೆ ಕ್ಷಮೆಯಾಚಿಸಿದ್ದಾರೆ.
‘ಚೌಕಿದಾರ್ ಚೋರ್ ಹೈ’ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ ಎಂದು ಚುನಾವಣಾ ಪ್ರಚಾರದ ವೇಳೆ ಆರೋಪ ಮಾಡಿದ್ದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ವಿವರಣೆ ಕೇಳಿತ್ತು. ಈ ಸಂಬಂಧ ಇಂದು ನ್ಯಾಯಾಲಯದ ಮುಂದೆ ಹಾಜರಾದ ರಾಹುಲ್ ಗಾಂಧಿ, ‘ಈ ರೀತಿ ಪದ ಬಳಕೆ ಮಾಡಬಾರದಾಗಿತ್ತು. ನ್ಯಾಯಾಲಯ ಈ ರೀತಿ ಎಲ್ಲಿಯೂ ಹೇಳಿಲ್ಲ. ಚುನಾವಣಾ ಕಾವಿನ ಬಿಸಿಯಲ್ಲಿ ಭಾಷಣ ಮಾಡುವಾಗ ಈ ಪ್ರಮಾದ ಆಗಿದೆ ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ನನ್ನ ಹೇಳಿಕೆಯನ್ನು ವಿಪಕ್ಷಗಳು ತಪ್ಪಾಗಿ ಅರ್ಥೈಸಿ ಬಳಕೆ ಮಾಡಿದೆ’ ಎಂದೂ ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವಾಗ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲೂ ಆರೋಪ ಮಾಡುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಈ ಅರ್ಜಿ ಅನ್ವಯ ದೂರು ದಾಖಲಿಸಿಕೊಂಡಿದ್ದ ನ್ಯಾಯಾಲಯ ಈ ಕುರಿತು ವಿವರಣೆ ನೀಡುವಂತೆ ರಾಹುಲ್ ಗಾಂಧಿಗೆ ಸೂಚನೆ ನೀಡಿತು.
ಏ.10 ರಂದು ರಫೇಲ್ ಒಪ್ಪಂದದ ಕುರಿತ ತೀರ್ಪು ಮರುಪರಿಶೀಲನೆ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೇಂದ್ರ ಸರಕಾರದ ಆಕ್ಷೇಪವನ್ನು ವಜಾಗೊಳಿಸಿ ಅರ್ಜಿ ಮರುಪರಿಶೀಲನೆಗೆ ಆದೇಶಿಸಿತ್ತು. ಈ ಬಗ್ಗೆ ಉತ್ತರ ಪ್ರದೇಶದ ಆಮೇಥಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡಿದ ರಾಹುಲ್ ಗಾಂಧಿ, “ಚೌಕಿದಾರ್ ಚೋರ್ ಹೈ” ಎಂದು ಸ್ವತಃ ಸುಪ್ರೀಂ ಒಪ್ಪಿಕೊಂಡಿದೆ. ಸುಪ್ರೀಂಕೋರ್ಟ್ ನ್ಯಾಯದ ಬಗ್ಗೆ ಇಂದು ಮಾತನಾಡಿದೆ. ಈ ದಿನ ನಾವು ಸಂತಸ ಪಡಬೇಕು ಎಂದಿದ್ದರು.
ರಾಹುಲ್ ಗಾಂಧಿಯ ಈ ಮಾತುಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡ ಬಿಜೆಪಿ ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
Comments are closed.