ರಾಷ್ಟ್ರೀಯ

ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ : ಅಜಂ ಖಾನ್ ವಿರುದ್ಧ ಎಫ್‌ಐಆರ್ ದಾಖಲು

Pinterest LinkedIn Tumblr

ಹೊಸದಿಲ್ಲಿ: ಉತ್ತರ ಪ್ರದೇಶದ ರಾಂಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸರು ಅಜಂ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ಮಹಿಳೆಯ ಘನತೆಯನ್ನು ಅವಹೇಳನ ಮಾಡಿದ ಆರೋಪ ದಾಖಲಿಸಿದ್ದಾರೆ.

ಜಯಪ್ರದಾ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಬಳಿಕ ಅಜಂ ಖಾನ್ ಐಎಎಸ್ ಅಧಿಕಾರಿಗಳ ವಿರುದ್ಧ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಜಿಲ್ಲಾಧಿಕಾರಿಗಳ ಬಗ್ಗೆ ಭಯಪಡಬೇಡಿ, ಅವರನ್ನೆಲ್ಲಾ ಮಾಯಾವತಿಯ ಚಪ್ಪಲಿ ಸ್ವಚ್ಛಗೊಳಿಸಲು ನೇಮಿಸುತ್ತೇವೆ’ ಎಂದು ಅಜಂ ಖಾನ್ ಹೇಳಿದ್ದರು.

ಜಯಪ್ರದಾ ಅವರು ಬಿಜೆಪಿ ಅಭ್ಯರ್ಥಿಯಾಗಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಅಜಂ ಖಾನ್‌ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ. ಅಜಂ ಖಾನ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಜಯಪ್ರದಾ ಆಗ್ರಹಿಸಿದ್ದಾರೆ.

‘ಈತನನ್ನು ಚುನಾವಣೆಗೆ ಸ್ಪರ್ಧಿಸಲು ಬಿಡಬಾರದು. ಈ ವ್ಯಕ್ತಿ ಗೆದ್ದರೆ ಪ್ರಜಾಪ್ರಭುತ್ವದ ಗತಿ ಏನು? ಸಮಾಜದಲ್ಲಿ ಮಹಿಳೆಯರಿಗೆ ಜಾಗವೇ ಇಲ್ಲದಂತಾದೀತು. ಹಾಗಾದರೆ ನಾವೆಲ್ಲ ಎಲ್ಲಿಗೆ ಹೋಗಬೇಕು? ನಾನೇನು ಸಾಯಬೇಕೆ? ಆಗ ನಿಮಗೆ ತೃಪ್ತಿಯಾದೀತೆ? ನಿಮಗೆ ಹೆದರಿ ನಾನು ರಾಂಪುರ ಬಿಟ್ಟು ಹೋಗುತ್ತೇನೆ ಎಂದು ಭಾವಿಸಿದ್ದೀರಾ? ಏನೇ ಬಂದರೂ ರಾಂಪುರ ಬಿಟ್ಟು ಹೋಗಲಾರೆ’ ಎಂದು ಜಯಪ್ರದಾ ಹೇಳಿದ್ದಾರೆ.

‘ಇದೆಲ್ಲಾ ನನಗೆ ಹೊಸತಲ್ಲ. 2009ರಲ್ಲಿ ನಾನು ಆತನ ಪಕ್ಷದಿಂದಲೇ ಸ್ಪರ್ಧಿಸಿದಾಗಲೂ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾತಾಡಿದ್ದ ವ್ಯಕ್ತಿ ಅಜಂ ಖಾನ್. ಆಗಲೂ ನನ್ನ ಬೆಂಬಲಕ್ಕೆ ಯಾರೂ ಬಂದಿರಲಿಲ್ಲ. ನಾನೊಬ್ಬ ಮಹಿಳೆ. ಆತ ಹೇಳಿದ್ದನ್ನು ಪುನರಾವರ್ತಿಸಲಾರೆ. ಇಂತಹ ಕೀಳು ಮಟ್ಟ ಹೇಳಿಕೆ ನೀಡಲು ನಾನು ಆತನಿಗೆ ಏನು ಮಾಡಿದ್ದೇನೆಯೋ ತಿಳಿಯದು’ ಎಂದು ಜಯಪ್ರದಾ ನುಡಿದರು.

ರಾಂಪುರದಲ್ಲಿ ಚುನಾವಣೆ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ಮುಖಂಡ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸುತ್ತ, ತಾಕತ್ತಿದ್ದರೆ ಚುನಾವಣೆ ಆಯೋಗ ತನ್ನ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲನ್ನೂ ಹಾಕಿದ್ದರು.

ಅಜಂ ಖಾನ್ ನೇರವಾಗಿ ಜಯಪ್ರದಾ ಹೆಸರು ಹೇಳದಿದ್ದರೂ, ಅವರನ್ನೇ ಉದ್ದೇಶಿಸಿ ಅವಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಬಿಜೆಪಿ ಬಣ್ಣಿಸಿವೆ.

ಸ್ಮೃತಿ ಇರಾನಿ ಖಂಡನೆ:
ಅಜಂ ಖಾನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಮಾಜವಾದಿ ಪಕ್ಷದ ವರಿಷ್ಠರು ಮೂಕಪ್ರೇಕ್ಷಕರಾಗಿ ಕುಳಿತಿದ್ದಾರೆ ಎಂದು ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. ‘ಒಬ್ಬ ಮಹಿಳೆಯ ಬಗ್ಗೆ ಅಂತಹ ಕೀಳು ಮಟ್ಟದ ಟಿಪ್ಪಣಿಗಳನ್ನು ಮಾಡುತ್ತಿರುವಾಗಲೂ ಎಸ್‌ಪಿ ವರಿಷ್ಠರು ಸುಮ್ಮನಿದ್ದಾರೆ. ರಾಜಕೀಯಕ್ಕೆ ಒಂದು ಘನತೆಯಿದೆ, ಭಾರತದಲ್ಲಿ ಮಹಿಳೆಯರಿಗೂ ಒಂದು ಘನತೆಯಿದೆ ಎಂಬುದನ್ನು ಎಸ್‌ಪಿ ಮುಖಂಡರು ಅರ್ಥ ಮಾಡಿಕೊಳ್ಳಬೇಕು’ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಶೀಲಾ ದೀಕ್ಷಿತ್ ಖಂಡನೆ:
ಜಯಪ್ರದಾ ವಿರುದ್ಧ ಅಜಂ ಖಾನ್ ನೀಡಿದ ಅವಮಾನಕಾರಿ ಹೇಳಿಕೆಯನ್ನು ದಿಲ್ಲಿ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಖಂಡಿಸಿದ್ದಾರೆ. ಅಜಂ ಖಾನ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ಇದು ಅತ್ಯಂತ ಖಂಡನೀಯ. ಆತ ಕೂಡಲೇ ಮಹಿಳೆಯರ ಕ್ಷಮೆಯಾಚಿಸಬೇಕು. ಇಂತಹ ಹೇಳಿಕೆ ಅಕ್ಷಮ್ಯ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶೀಲಾ ದೀಕ್ಷಿತ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್:
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರೂ ಅಜಂ ಖಾನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಎಸ್‌ಪಿ ನಾಯಕನ ಚರಿತ್ರೆಯೇ ಅಂಥದ್ದು, ಮಹಿಳೆಯರನ್ನು ಅವಮಾನಿಸುವ ಈತನ ಪ್ರವೃತ್ತಿ ಹೊಸದೇನಲ್ಲ. ಈಗಲೂ ಈತನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಹಿಸಿಕೊಳ್ಳಲಾಗದು. ಚುನಾವಣೆ ಆಯೋಗ ಕೂಡಲೇ ಅಜಂ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಮಹಿಳಾ ಹಕ್ಕುಗಳ ಸಂಘಟನೆ ಅಜಂ ಖಾನ್‌ಗೆ ನೋಟೀಸ್ ಕೂಡ ಜಾರಿ ಮಾಡಿದೆ.

‘ಆತ ಯಾವಾಗಲೂ ಕೊಳಕು ಮಾತಾಡುತ್ತಾನೆ. ಈ ಚುನಾವಣೆ ಸಂದರ್ಭದಲ್ಲಿ ಎರಡನೇ ಬಾರಿಗೆ ಮಹಿಳಾ ರಾಜಕಾರಣಿ ವಿರುದ್ಧ ಇಂತಹ ಹೇಳಿಕೆ ನೀಡಿದ್ದಾನೆ. ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನೋಟಿಸ್‌ ಜಾರಿ ಮಾಡಿದೆ’ ಎಂದು ರೇಖಾ ಶರ್ಮಾ ತಿಳಿಸಿದರು.

‘ಆತನಿಗೊಂದು ಮರೆಯಲಾಗದ ಪಾಠ ಕಲಿಸಲೇಬೇಕು. ಚುನಾವಣೆ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇನ್ನು ಮುಂದೆ ಆತನ ಬಾಯಿಯಿಂದ ಇಂತಹ ಹೇಳಿಕೆಗಳು ಬರದಂತೆ ತಡೆಯಬೇಕು. ಮಹಿಳೆಯರು ಲೈಂಗಿಕ ವಸ್ತುಗಳಲ್ಲ. ಮಹಿಳಾ ಮತದಾರರು ಅಂತಹ ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸಬೇಕು’ ಎಂದು ರೇಖಾ ಶರ್ಮಾ ಆಗ್ರಹಿಸಿದರು.

‘ಜಯಪ್ರದಾ ಅವರ ಬಗ್ಗೆ ಅಜಂ ಖಾನ್ ನೀಡಿದ ಹೇಳಿಕೆ ಅತ್ಯಂತ ನಾಚಿಕೆಗೇಡಿನದ್ದು. ರಾಜಕೀಯ ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು’ ಎಂದು ರಾಜ್ಯ ಬಿಜೆಪಿ ವಕ್ತಾರ ಚಂದ್ರಮೋಹನ್ ಪಿಟಿಐ ಜತೆ ಪ್ರತಿಕ್ರಿಯಿಸಿದರು.

ಜಯಪ್ರದಾ ಬಗ್ಗೆ ಅಜಂ ಖಾನ್ ನೀಡಿದ ಅವಹೇಳನಕಾರಿ ಹೇಳಿಕೆ ಕುರಿತು ಬಿಎಸ್ಪಿ ನಾಯಕಿ ಮಾಯಾವತಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಎಸ್‌ಪಿ ‘ಪಿತಾಮಹ’ ಮಾತಾಡಲಿ: ಸುಷ್ಮಾ ಸ್ವರಾಜ್
ಸಮಾಜವಾದಿ ಪಕ್ಷದ ‘ಪಿತಾಮಹ’ ಮುಲಾಯಂ ಸಿಂಗ್ ಯಾದವ್ ಈಗ ಅಜಂ ಖಾನ್ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒತ್ತಾಯಿಸಿದರು.

ಅಜಂ ಖಾನ್ ನಿರಾಕರಣೆ:
ಜಯಪ್ರದಾ ವಿರುದ್ಧ ಅವಹೇಳನಕಾರಿ ಮಾತಾಡಿದ ಆರೋಪಗಳನ್ನು ಅಜಂ ಖಾನ್ ನಿರಾಕರಿಸಿದ್ದಾರೆ. ತಾನು ಯಾರ ಹೆಸರನ್ನೂ ಹೇಳಿಲ್ಲ ಎಂದಿರುವ ಖಾನ್, ತಪ್ಪಿತಸ್ಥನೆಂದು ಸಾಬೀತಾದರೆ ಕಣದಿಂದ ಹಿಂದೆ ಸರಿಯಲು ಸಿದ್ಧ ಎಂದು ಹೇಳಿಕೊಂಡರು.

Comments are closed.