ಬೆಂಗಳೂರು: ಕೆಲ ದಿನಗಳ ಹಿಂದಷ್ಟೆ ಚುನಾವಣಾ ಪ್ರಚಾರಕ್ಕೆಂದು ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಅವರು ಬಂದಿಳಿದ ಹೆಲಿಕಾಪ್ಟರ್ನಿಂದ ಕಪ್ಪು ಬಣ್ಣದ ಟ್ರಂಕ್ವೊಂದನ್ನು ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ಆ ಅನುಮಾನಾಸ್ಪದ ಕಪ್ಪು ಬಣ್ಣದ ಟ್ರಂಕ್ ಬಗ್ಗೆ ತನಿಖೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ಕರ್ನಾಟಕ ಕಾಂಗ್ರೆಸ್ ದೂರು ನೀಡಿದೆ.
ಕಪ್ಪು ಪೆಟ್ಟಿಗೆಯನ್ನು ಹೆಲಿಪ್ಯಾಡ್ನಿಂದ ಕೊಂಡೊಯ್ಯುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಿನ್ನೆ ಶೇರ್ ಮಾಡಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಚಿತ್ರದುರ್ಗಕ್ಕೆ ಪ್ರಚಾರಕ್ಕೆ ಬಂದಿದ್ದ ಪಿಎಂ ಮೋದಿ ಅವರ ಹೆಲಿಕಾಪ್ಟರ್ನಿಂದ ಅನುಮಾನಾಸ್ಪದವಾದ ಟ್ರಂಕ್ವೊಂದನ್ನು ಕೆಳಗಿಳಿಸಲಾಗಿದೆ. ಆ ಟ್ರಂಕ್ ಅನ್ನು ಗಡಿಬಿಡಿಯಿಂದ ಕಾರಿನ ಬಳಿಗೆ ಸಿಬ್ಬಂದಿ ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಆ ಕಾರು ಯಾರದ್ದು ಮತ್ತು ಆ ಪೆಟ್ಟಿಗೆಯಲ್ಲೇನಿದೆ ಎಂಬುದನ್ನು ಚುನಾವಣಾ ಆಯೋಗ ತನಿಖೆ ನಡೆಸಬೇಕೆಂದು ಬರೆದುಕೊಂಡಿದ್ದರು.
ಈ ಬಗ್ಗೆ ಇಂದು ಅಧಿಕೃತವಾಗಿ ಕರ್ನಾಟಕ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮ, ಚುನಾವಣಾ ಆಯೋಗ ಈ ಬಗ್ಗೆ ತುರ್ತಾಗಿ ತನಿಖೆ ನಡೆಸಬೇಕು. ಆ ಟ್ರಂಕ್ನಲ್ಲಿ ಏನಿತ್ತು ಎಂಬುದು ಬಹಿರಂಗವಾಗಬೇಕು. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ವಿಭಾಗ ಈಗಾಗಲೇ ದೂರು ನೀಡಿದೆ ಎಂದು ತಿಳಿಸಿದ್ದಾರೆ.
ಏ. 9ರಂದು ಚಿತ್ರದುರ್ಗದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಆ ವೇಳೆ ಹೆಲಿಕಾಪ್ಟರ್ನಿಂದ ಇಳಿಸಲ್ಪಟ್ಟ ಕಪ್ಪು ಪೆಟ್ಟಿಗೆಯಲ್ಲಿ ಹಣವಿರಲಿಲ್ಲ ಎಂದಾದರೆ ತನಿಖೆಯಾಗಲಿ, ಆ ಬಗ್ಗೆ ಇರುವ ಅನುಮಾನವೂ ಬಗೆಹರಿಯಲಿ ಎಂದು ಶರ್ಮ ಆಗ್ರಹಿಸಿದ್ದಾರೆ.
Comments are closed.