ಜೋಧ್ಪುರ: ರಾಜಸ್ಥಾನದ ಜೋಧ್ಪುರ ನ್ಯಾಯಾಲಯ ಶನಿವಾರ ವಿಚಿತ್ರವಾದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಯಾವುದೇ ಅಪರಾಧ ಪ್ರಕರಣದಲ್ಲಿ ಕೇವಲ ಮನುಷ್ಯರನ್ನು ಮಾತ್ರ ಕೋರ್ಟ್ಗೆ ಹಾಜರುಪಡಿಸಲಾಗುತ್ತಿತ್ತು. ಆದರೆ, ಶನಿವಾರ ಹಸುವೊಂದನ್ನು ಹಾಜರುಪಡಿಸಿ, ಅದನ್ನು ನ್ಯಾಯಾಂಗದ ವಶದಲ್ಲೇ ಇರಿಸಿಕೊಳ್ಳಲಾಯಿತು!
ಇದು ಯಾವುದೋ ಒಂದು ಚಲನಚಿತ್ರದ ಕಥೆಯಂತೆ ಕಾಣಿಸಬಹುದು. ಆದರೆ, ಇದು ನಿಜ. ಹಸುವೊಂದರ ಮಾಲೀಕತ್ವದ ಬಗ್ಗೆ ಇಬ್ಬರ ನಡುವೆ ಭಾರಿ ವಿವಾದ ಏರ್ಪಟ್ಟಿತ್ತು. ಈ ಹಸುವಿಗಾಗಿ ಅವರಿಬ್ಬರೂ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದರು. ಪೈಪೋಟಿ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದರು.
ಹಾಗೆ ದೂರು ದಾಖಲಿಸಿಕೊಳ್ಳುತ್ತಿದ್ದ ಪೊಲೀಸರು ಇಬ್ಬರನ್ನೂ ಸಮಾಧಾನಪಡಿಸಿ, ವಾಪಸು ಕಳುಹಿಸುತ್ತಿದ್ದರು. ಆದರೆ, ಕೆಲದಿನಗಳ ಹಿಂದೆ ಇವರಿಬ್ಬರೂ ಮತ್ತೆ ಜಗಳ ಮಾಡಿಕೊಂಡು ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದರಿಂದ ಬೇಸತ್ತ ಪೊಲೀಸರು, ಪ್ರಕರಣವನ್ನು ಕೋರ್ಟ್ ಮೂಲಕವೇ ಬಗೆಹರಿಸಿಕೊಳ್ಳಲಿ ಎಂದು ಹೇಳಿ ಎಫ್ಐಆರ್ ದಾಖಲಿಸಿ, ಕೋರ್ಟ್ ವಿಚಾರಣೆಗೆ ಒಪ್ಪಿಸಿದರು.
ಇದೀಗ ವಿಚಾರಣೆ ಆರಂಭಿಸಿರುವ ಜೋಧ್ಪುರದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು, ವಿವಾದಕ್ಕೆ ಕಾರಣವಾದ ಹಸುವನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಸೂಚಿಸಿದರು. ಅದರಂತೆ ಪೊಲೀಸರು ಹಸುವನ್ನು ಕೋರ್ಟ್ಗೆ ಹಾಜರುಪಡಿಸಿದರು. ಅದರ ದೈಹಿಕ ಚಹರೆಯನ್ನು ಗುರುತು ಹಾಕಿಕೊಂಡ ನ್ಯಾಯಾಧೀಶರು, ವಿವಾದ ಇತ್ಯರ್ಥವಾಗುವವರೆಗೂ ಹಸುವನ್ನು ನ್ಯಾಯಾಂಗ ವಶದಲ್ಲೇ ಇರಿಸಿಕೊಳ್ಳಲು ಆದೇಶಿಸಿದ್ದಾರೆ. ಏ.15ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.
Comments are closed.