ರಾಷ್ಟ್ರೀಯ

ಬಾಲಕೋಟ್ ದಾಳಿ ನಂತರ ಭಾರತದ ಮೇಲೆ ಪಾಕ್ ನ ಪ್ರತಿದಾಳಿ ವಿಫಲವಾಗಿತ್ತೇ?

Pinterest LinkedIn Tumblr


ನವದೆಹಲಿ: ಪುಲ್ವಾಮ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಗಡಿಭಾಗದಲ್ಲಿದ್ದ ಜೈಷ್ ಉಗ್ರರ ನೆಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿ ಪಾಕಿಸ್ತಾನದ ನಿದ್ದೆಗೆಡಿಸಿತ್ತು. ಬಾಲಕೋಟ್​ಗೆ ಭಾರತೀಯ ವಿಮಾನಗಳು ನುಗ್ಗಿ ದಾಳಿ ನಡೆಸಿದ ಮರುದಿನವೇ ಪಾಕಿಸ್ತಾನ ಕೂಡ ಪ್ರತಿದಾಳಿ ನಡೆಸಿತ್ತು. ಆದರೆ, ಭಾರತದ ಮಿಲಿಟರಿ ನೆಲೆಗಳನ್ನು ಗುರಿ ಮಾಡಿಕೊಂಡ ಪಾಕ್ ನಡೆಸಿದ್ದ ವೈಮಾನಿಕ ದಾಳಿ ವಿಫಲವಾತ್ತಿದ್ದೆಂದು ಎಎನ್​ಐ ಸುದ್ದಿ ಸಂಸ್ಥೆಯ ವರದಿಯೊಂದು ಹೇಳಿದೆ. ಸರಕಾರದ ಮೂಲಗಳಿಂದ ಮಾಹಿತಿ ಪಡೆದು ವರದಿ ಮಾಡಿರುವ ಎಎನ್​ಐ, ಫೆ. 27ರಂದು ನಡೆದ ದಾಳಿಯಲ್ಲಿ ಅಮೆರಿಕದ ಎಫ್​-16, ಫ್ರಾನ್ಸ್​ನ ಮಿರೇಜ್-3 ಹಾಗೂ ಚೀನಾದ ಜೆಎಫ್-17 ಸೇರಿದಂತೆ ಒಟ್ಟು 20 ವಿಮಾನಗಳನ್ನ ಬಳಕೆ ಮಾಡಿತ್ತೆಂದು ತಿಳಿಸಿದೆ.

ಈ 20 ವಿಮಾನಗಳು ಭಾರತದ 3 ಸೇನಾ ನೆಲೆಗಳ ಮೇಲೆ 1 ಸಾವಿರ ಕಿಲೋ ತೂಕದ 11 ಬಾಂಬ್​ಗಳನ್ನು ಹಾಕಲು ಯತ್ನಿಸಿದ್ದವು. ಆದರೆ, ಭಾರತದ ವಿಮಾನಗಳು ಪ್ರತಿದಾಳಿ ನಡೆಸತೊಡಗಿದಾಗ ಗಾಬರಿಯಲ್ಲಿ ಪಾಕ್ ವಿಮಾನಗಳ ಗುರಿ ತಪ್ಪಿವೆ. ಉದ್ದೇಶಿತ ಗುರಿಗಿಂತ ಸ್ವಲ್ಪ ದೂರದ ಸ್ಥಳದಲ್ಲಿ ಈ ಬಾಂಬ್​ಗಳು ಬಿದ್ದವು ಎಂದು ಎಎನ್​ಐ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

ಅಂದು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಪ್ರತಿದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿ, ತಮ್ಮದು ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ. ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವುದು ಉದ್ದೇಶವಾಗಿತ್ತು. ಸೇನಾ ನೆಲೆಗಳ ಆಚೆ ನಿರ್ಜನ ಸ್ಥಳವನ್ನು ಗುರುತಿಸಿ ಅಲ್ಲಿ ಬಾಂಬ್ ದಾಳಿ ನಡೆಸಲು ಯೋಜಿಸಿದ್ದೆವು. ಅದರಂತೆ ಆ ಉದ್ದೇಶ ನೆರವೇರಿದೆ ಎಂದು ಸ್ಪಷ್ಟೀಕರಣ ನೀಡಿದ್ದರು.

ಆದರೆ, ಪಾಕ್ ಯುದ್ಧವಿಮಾನಗಳು ಭಾರತದ ಮಿಲಿಟರಿ ನೆಲೆಗಳನ್ನೇ ಟಾರ್ಗೆಟ್ ಮಾಡಿದ್ದವೆಂಬುದು ಭಾರತದ ವಾದ. ಈ ದಾಳಿಯಲ್ಲಿ ಪಾಕಿಸ್ತಾನವು ಎಫ್​-16 ಯುದ್ಧ ವಿಮಾನ ಬಳಕೆ ಮಾಡಿದೆ. ಪಾಕಿಸ್ತಾನಕ್ಕೆ ಸೆರೆಸಿಕ್ಕಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್ ಅವರು ತಮ್ಮ ಮಿಗ್​-21 ಯುದ್ಧವಿಮಾನದ ಮೂಲಕ ಆರ್-73 ಕ್ಷಿಪಣಿಯನ್ನು ಪ್ರಯೋಗಿಸಿ ಎಫ್-16 ಯುದ್ಧವಿಮಾನವನ್ನು ಹೊಡೆದುಹಾಕಿದರೆಂದು ಭಾರತ ಹೇಳುತ್ತಿದೆ. ಆದರೆ, ಇದನ್ನು ಪಾಕಿಸ್ತಾನ ಮೊದಲಿಂದಲೂ ಅಲ್ಲಗಳೆಯುತ್ತಾ ಬಂದಿದೆ. ಚೀನಾ-ಪಾಕ್ ಜಂಟಿ ನಿರ್ಮಿತ ಜೆಎಫ್-17 ಯುದ್ಧವಿಮಾನವು ಭಾರತದ ಮಿಗ್-21 ವಿಮಾನವನ್ನು ಹೊಡೆದುರುಳಿಸಿತೆಂಬುದು ಪಾಕ್ ವಾದ.

ಇದೇ ವೇಳೆ, ಪೂಂಚ್ ಸೆಕ್ಟರ್ ಸಮೀಪ ಪಾಕಿಸ್ತಾನ ಹಾಕಿರುವ ಬಾಂಬ್​ಗಳನ್ನ ಹಾಗೂ ಕೆಲ ಅವಶೇಷಗಳನ್ನ ಭಾರತೀಯ ಸೇನಾಧಿಕಾರಿಗಳ ತಂಡವೊಂದು ಅಧ್ಯಯನ ಮಾಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ.

Comments are closed.