ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಕರ ಅನುಮೋದನೆ ಪಡೆಯದೇ ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ನಿಷೇಧಿಸುವ ಘೋಷಣೆ ಪ್ರಕಟಿಸಿದ್ದರು ಎನ್ನುವ ವಿಚಾರ ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದಿದೆ.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ನಿರ್ದೇಶಕರ ಮಂಡಳಿ ಸಭೆಯ ಮಾಹಿತಿ ನೀಡಬೇಕೆಂದು ವೆಂಕಟೇಶ್ ನಾಯಕ್ ಎಂಬವರು ಅರ್ ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಆರ್ ಬಿಐ ಎಲ್ಲ ಮಾಹಿತಿಗಳನ್ನು ನೀಡಲು ನಿರಾಕರಿಸಿತ್ತು. ಇದೀಗ ಸಭೆಯ ಎಲ್ಲ ಮಾಹಿತಿಗಳನ್ನು ಆರ್ ಬಿಐ ನೀಡಿದೆ.
2016 ನವೆಂಬರ್ 8ರಂದು ಸಂಜೆ 5.30ಕ್ಕೆ ನೋಟ್ ನಿಷೇಧ ಘೋಷಣೆಗೆ ಸಂಬಂಧಿಸಿದಂತೆ ಆರ್ ಬಿಐ ನಿರ್ದೇಶಕ ಮಂಡಳಿಯ ಸಭೆಯ ಕರೆಯಲಾಗಿತ್ತು. ಸಭೆಯಲ್ಲಿ ಕೆಲ ನಿರ್ದೇಶಕರು ಈ ನಿರ್ಧಾರ ವಿರೋಧಿಸಿ, ಹೆಚ್ಚಿನ ಕಪ್ಪುಹಣ ನಗದು ರೂಪದಲ್ಲಿ ಶೇಖರಣೆ ಆಗಿಲ್ಲ. ಬಹುತೇಕ ಕಪ್ಪು ಹಣ ರಿಯಲ್ ಎಸ್ಟೇಟ್, ಚಿನ್ನ, ಬೇನಾಮಿ ಆಸ್ತಿಗಳಲ್ಲಿದೆ. ಹಾಗಾಗಿ ನೋಟ್ ಬ್ಯಾನ್ ನಿಂದ ಕಪ್ಪು ಹಣದ ನಿಯಂತ್ರಣ ಅಸಾಧ್ಯ ಎಂದು ಹೇಳಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ನಿರ್ದೇಶಕರ ಅನುಮೋದನೆ ಪಡೆಯದೇ ನರೇಂದ್ರ ಮೋದಿ ರಾತ್ರಿ 8 ಗಂಟೆಗೆ ನೋಟು ನಿಷೇಧದ ನಿರ್ಧಾರ ಪ್ರಕಟಿಸಿದ್ದಾರೆ ಎನ್ನುವ ವಿಚಾರ ಆರ್ ಟಿಐ ಅಡಿ ಬೆಳಕಿಗೆ ಬಂದಿದೆ.
500 ಮತ್ತು 1000 ರೂ. ಮುಖಬೆಲೆಯ ನೋಟ್ಗಳ ನಿಷೇಧದಿಂದಾಗಿ ಕಪ್ಪುಹಣದ ನಿಯಂತ್ರಣ, ಇ-ಪೇಮೆಂಟ್ ವ್ಯವಹಾರ ವೃದ್ಧಿಯಾಗಲಿದೆ. ಜನರಿಗೆ ಆನ್ಲೈನ್ ಮೂಲಕ ವ್ಯವಹಾರಗಳು ನಡೆಸಲು ನೋಟ್ ಬ್ಯಾನ್ ನಾಂದಿಯಾಗಲಿದೆ. 2011-12 ರಿಂದ 2015-16ರವರೆಗೆ ದೇಶದ ಅರ್ಥವ್ಯವಸ್ಥೆ ಶೇ.30 ರಷ್ಟು ಏರಿಕೆ ಕಂಡಿದೆ. ಇತ್ತ 500 ರೂ. ಮೌಲ್ಯದ ನೋಟುಗಳು ಶೇ.76 ಮತ್ತು 1 ಸಾವಿರ ಮೌಲ್ಯದ ನೋಟು ಶೇ.109ರಷ್ಟು ಹೆಚ್ಚಾಗಿವೆ ಎಂದು ಸರ್ಕಾರ ವಾದಿಸಿತ್ತು.
ಹೆಚ್ಚಿನ ಮೌಲ್ಯದ ನೋಟುಗಳ ಚಲಾವಣೆಯನ್ನು ತಗ್ಗಿಸಿ ಕಪ್ಪು ಹಣವನ್ನು ನಿಯಂತ್ರಿಸಿ ಆರ್ಥಿಕ ಅಭಿವೃದ್ಧಿ ವಿಚಾರದ ಸರ್ಕಾರದ ಪ್ರಸ್ತಾವನೆಯನ್ನು ಆರ್ ಬಿಐ ಒಪ್ಪಿರಲಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ನೋಟು ನಿಷೇಧಕ್ಕೂ ಮೊದಲು ಹಣಕಾಸು ಸಚಿವಾಲಯ ಮತ್ತು ಆರು ತಿಂಗಳ ಕಾಲ ಚರ್ಚೆ ನಡೆಸಿತ್ತು. ಕೇಂದ್ರದ ಕೆಲ ಪ್ರಸ್ತಾಪಗಳಿಗೆ ಸಮ್ಮತಿ ಸೂಚಿಸದೇ ಇದ್ದರೂ ಆರ್ ಬಿಐ ನೋಟ್ ನಿಷೇಧಕ್ಕೆ ಹಸಿರು ನಿಶಾನೆ ನೀಡಿತ್ತು.
Comments are closed.