ನವದೆಹಲಿ: ಮೊನ್ನೆ ರಾತ್ರಿ ಪಾಕಿಸ್ತಾನದಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪಾಕಿಸ್ತಾನದ ಸ್ಥಳೀಯರಿಂದ ತೀವ್ರವಾಗಿ ಹಲ್ಲೆಗೊಳಗಾದ ಕಾರಣ ಪಕ್ಕೆಲುಬು ಮುರಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ.
60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ವರ್ತಮಾನ್ ಅವರು ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ. ಪಾಕಿಸ್ತಾನದ ಎಫ್- 16 ಯುದ್ಧವಿಮಾನವನ್ನು ಹಿಮ್ಮೆಟ್ಟಿಸುವ ಭರದಲ್ಲಿ ಪಾಕಿಸ್ತಾನದೊಳಗೆ ಬಿದ್ದಿದ್ದ ಮಿಗ್- 21 ಯುದ್ಧವಿಮಾನವನ್ನು ಚಲಾಯಿಸುತ್ತಿದ್ದ ಐಎಎಫ್ ಪೈಲಟ್ ಅಭಿನಂದನ್ ಅವರಿಗೆ ಅಲ್ಲಿನ ಸ್ಥಳೀಯರು ಹಲ್ಲೆ ಮಾಡಿದ್ದ ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು. ಆ ಘಟನೆಯಲ್ಲಿ ಅಭಿನಂದನ್ ಅವರ ಪಕ್ಕೆಲುಬಿಗೆ ತೀವ್ರ ಹಾನಿಯಾಗಿರುವುದಾಗಿ ಎಂಆರ್ಐ ಸ್ಕ್ಯಾನಿಂಗ್ನಲ್ಲಿ ತಿಳಿದುಬಂದಿದೆ.
ಅಭಿನಂದನ್ ಅವರ ಬಲಗಣ್ಣಿಗೂ ತೀವ್ರ ಗಾಯಗಳಾಗಿದ್ದು, ಇನ್ನೂ ಕೆಲವು ವೈದ್ಯಕೀಯ ತಪಾಸಣೆಗಳು ಬಾಕಿಯಿವೆ. ದೆಹಲಿ ಕಂಟೋನ್ಮೆಂಟ್ನಲ್ಲಿರುವ ರಿಸರ್ಚ್ ಆ್ಯಂಡ್ ರೆಫರಲ್ ಹಾಸ್ಪಿಟಲ್ನಲ್ಲಿ ಅಭಿನಂದನ್ ತಪಾಸಣೆ ನಡೆಸಲಾಗುತ್ತಿದೆ. ಭಾರತದ ಗಡಿಯೊಳಗೆ ಬಂದ ಕೂಡಲೆ ಅವರನ್ನು ಏರ್ಪೋರ್ಸ್ ಸೆಂಟ್ರಲ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು.
ಪಾಕ್ ಸೇನೆಗೆ ಭಾರತದ ಯಾವುದೇ ಗೌಪ್ಯ ವಿಚಾರಗಳನ್ನು ಬಿಟ್ಟುಕೊಡದೆ ದೇಶಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಎರಡೂವರೆ ದಿನಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದ ಅಭಿನಂದನ್ ಅವರ ಧೈರ್ಯಕ್ಕೆ ದೇಶದ ರಾಜಕಾರಣಿಗಳು, ಸೇನಾಧಿಕಾರಿಗಳು, ಸೆಲೆಬ್ರಿಟಿಗಳು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ನಿನ್ನೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಅಭಿನಂದನ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.
Comments are closed.