
ನವದೆಹಲಿ: ಪಾಕಿಸ್ತಾನದ ಜೈಷ್-ಇ- ಮೊಹಮದ್ ಭಯೋತ್ಪಾದಕ ಶಿಬಿರದ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಭಾರತೀಯ ಸೇನೆಗೆ ಕಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಶಹಬ್ಬಾಸ್ಗಿರಿ ನೀಡಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಭಾರತದ ನಡೆಯ ಬಗ್ಗೆ ಟ್ವೀಟ್ ಮಾಡಿರುವ ನಟರಾದ ರಜನಿಕಾಂತ್, ಕಮಲಹಾಸನ್, ಅಕ್ಷಯಕುಮಾರ್, ಸಲ್ಮಾನ್ ಖಾನ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಭಾರತೀಯ ವಾಯುಸೇನೆ ಬಗ್ಗೆ ಹೆಮ್ಮೆಯೆನಿಸುತ್ತದೆ. ಜೈ ಹೋ!! ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ಬ್ರಾವೋ ಇಂಡಿಯಾ (ಶಹಬ್ಬಾಸ್) ಎಂದು ಸೂಪರ್ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ನಮ್ಮ ದೇಶದ 12 ಯುದ್ಧವಿಮಾನಗಳು ಸುರಕ್ಷಿತವಾಗಿ ವಾಪಾಸ್ ಬಂದಿವೆ. ಈ ಹೀರೋಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ ಎಂದು ತಮಿಳು ನಟ ಕಮಲಹಾಸನ್ ಟ್ವೀಟ್ ಮಾಡಿದ್ದಾರೆ.
ಭಾರತೀಯ ವಾಯುಸೇನೆ ನಮ್ಮ ಹೆಮ್ಮೆ. ದೇಶಕ್ಕಾಗಿ ಉಗ್ರರ ಜಾಗಕ್ಕೆ ತೆರಳಿ ದಾಳಿ ನಡೆಸಿ ಬಂದಿದ್ದಾರೆ. ಇನ್ನು ನಾವು ಸುಮ್ಮನೆ ಕೂರುವುದಿಲ್ಲ… ಎಲ್ಲದಕ್ಕೂ ತಿರುಗೇಟು ಕೊಡುತ್ತೇವೆ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಭಾರತದ ಸೇನೆಗೆ ನನ್ನ ಸಲ್ಯೂಟ್ ಎಂದು ನಟ ವರುಣ್ ಧವನ್ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಟಿಯರಾದ ಸ್ವರ ಭಾಸ್ಕರ್ ಕೂಡ ಸೇನೆಗೆ ಸಲ್ಯೂಟ್ ಮಾಡಿದ್ದಾರೆ.
ನಮ್ಮ ದೇಶವನ್ನು ಸುರಕ್ಷಿತವಾಗಿಡಲು ಭಾರತೀಯ ಸೇನೆ ತೋರಿದ ಅಪರಿಮಿತ ಉತ್ಸಾಹ ಮತ್ತು ಧೈರ್ಯಕ್ಕೆ ದೊಡ್ಡ ಸಲ್ಯೂಟ್ ಎಂದು ಬಾಲಿವುಡ್ ನಟ ಸಂಜಯ್ ದತ್ ಹೇಳಿದ್ದಾರೆ.
ನಟಿ ರವೀನಾ ಟಂಡನ್ ಕೂಡ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಟ್ವೀಟ್ ಮಾಡಿದ್ದು, ಭಾರತ ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಇಡೀ ದೇಶವೇ ಸಂಭ್ರಮಿಸುತ್ತದೆ. 12 ಯುದ್ಧ ವಿಮಾನಗಳ ನೇತೃತ್ವ ವಹಿಸಿದ್ದವರ ಗಟ್ಟಿ ಹೃದಯಕ್ಕೆ ನನ್ನ ದೊಡ್ಡ ಸಲ್ಯೂಟ್. ಶತ್ರುರಾಷ್ಟ್ರದೊಳಗೆ ಹೋಗಿ ದಾಳಿ ಮಾಡಿ ಬರುವುದು ಸುಲಭದ ಮಾತಲ್ಲ. ಪುಲ್ವಾಮಾದಲ್ಲಿ ಪ್ರಾಣತ್ಯಾಗ ಮಾಡಿದವರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿರಬಹುದು. ನಮ್ಮ ನೆರೆಯ ರಾಷ್ಟ್ರಗಳು ಭಯೋತ್ಪಾದನೆಯ ಬಗ್ಗೆ ಆರೋಪ ಮಾಡುವುದರಲ್ಲೇ ಸಮಯ ಕಳೆಯುತ್ತಿವೆ. ಅವರು ನಮಗೆ ಧನ್ಯವಾದ ಹೇಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ಟ್ವೀಟ್ ಮಾಡಿದ್ದು, 12 ಸೈನಿಕರೂ ಸುರಕ್ಷಿತವಾಗಿ ವಾಪಾಸ್ ಆಗಿದ್ದಾರೆ ಎಂಬುದು ಖುಷಿಯ ವಿಚಾರ. ಭಾರತೀಯ ವಾಯುಸೇನೆಗೆ ದೊಡ್ಡ ಸಲ್ಯೂಟ್ ಎಂದಿದ್ದಾರೆ.
ಇವರಷ್ಟೇ ಅಲ್ಲದೆ ಅಭಿಷೇಕ್ ಬಚ್ಚನ್, ಟಾಲಿವುಡ್ ನಟ ಸಿದ್ಧಾರ್ಥ್, ಬಾಲಿವುಡ್ ನಟರಾದ ಸೊನಾಕ್ಷಿ ಸಿನ್ಹಾ, ಸುನೀಲ್ ಶೆಟ್ಟಿ, ಸೋನು ಸೂದ್, ಅನುಪಮ್ ಖೇರ್, ವಿವೇಕ್ ಒಬೆರಾಯ್ ಕೂಡ ಟ್ವೀಟ್ ಮಾಡಿದ್ದಾರೆ.
Comments are closed.