ನವದೆಹಲಿ: ಪುಲ್ವಾಮಾ ದಾಳಿ ನಂತರದಲ್ಲಿ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿರುವ ಭಾರತ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಆಮದು ಸುಂಕ ಏರಿಕೆ, ಪಾಕ್ಗೆ ನೀರು ಬಿಡುವುದನ್ನು ನಿಲ್ಲಿಸಿದ್ದು, ಟೊಮೊಟೊ ರಫ್ತು ಸ್ಥಗಿತಗೊಳಿಸಿದ್ದು ಪ್ರಮುಖವಾದುದು. ಇದರ ಪರಿಣಾಮ ಪಾಕ್ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಕಿಡಿಕಾರಿದ್ದು, ಟೊಮೆಟೊ ರಫ್ತು ಬಂದ್ ಮಾಡಿದ್ದಕ್ಕೆ ಪ್ರತಿಯಾಗಿ ಅಣು ಬಾಂಬ್ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲಾರದ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ಟೊಮೆಟೊ ವಹಿವಾಟು ನಡೆಸುವ ಕೇಂದ್ರ. ಕೋಲಾರದಿಂದ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಬಂದ್ ಮಾಡಲು ಈ ಮಾರುಕಟ್ಟೆ ನಿರ್ಧಾರ ಮಾಡಿದೆ. ಇದಕ್ಕೆ ಪಾಕಿಸ್ತಾನ ಮಾಧ್ಯಮಗಳು ಕಿಡಿಕಾರಿವೆ. ಈ ಬಗ್ಗೆ ಆ್ಯಂಕರ್ ಒಬ್ಬರು ಲೈವ್ನಲ್ಲಿ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ.
“ನಾವು ಈ ಟೊಮಾಟೊವನ್ನು ರಾಹುಲ್ ಅಥವಾ ಮೋದಿ ಅವರ ಮುಖಕ್ಕೆ ಎಸೆಯುತ್ತೇವೆ. ಭಾರತ ಕೊಳಕು ತುಂಬಿದ ರಾಷ್ಟ್ರ. ಟೊಮಾಟೊಗೆ ಪ್ರತಿಯಾಗಿ ಆ್ಯಟಂಬಾಂಬ್ ಮೂಲಕ ಉತ್ತರ ಕೊಡುವ ಸಮಯ ಬಂದಿದೆ,” ಎಂದು ಪಾಕ್ ಆ್ಯಂಕರ್ ಓರ್ವ ಹೇಳಿಕೊಂಡಿದ್ದಾರೆ. ಅಲ್ಲದೆ, ಸಮಯ ಬಂದರೆ ನಾವು ಅಣುಬಾಂಬ್ ದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಆ್ಯಂಕರ್ ತುಂಬಾನೇ ಸಿಟ್ಟಿನಿಂದ ಮಾತನಾಡಿದ್ದರು. ಎರಡು ನಿಮಿಷಗಳ ಕಾಲ ಎಲ್ಲಿಯೂ ಬ್ರೇಕ್ ತೆಗೆದುಕೊಳ್ಳದೆ ಅವರು ನಿರಂತರವಾಗಿ ಭಾರತದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. “ಈತನ ಮಾತು ಕೇಳಿ ಅವರ ಕಚೇರಿಯಲ್ಲಿ ಕುಳಿತವರೇ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಹೀಗಿರುವಾಗ ನಮಗೆ ನಗು ಬರದೆ ಇರುತ್ತದೆಯೇ,” ಎಂದು ಪ್ರಶ್ನಿಸಿದ್ದಾರೆ.
Comments are closed.