ಲಕ್ನೋ: ಉತ್ತರಪ್ರದೇಶದಲ್ಲಿ ಕಳೆದ ತಿಂಗಳು ಮೈತ್ರಿ ಮಾಡಿಕೊಂಡಿದ್ದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಸಮಾಜವಾದಿ ಪಕ್ಷ (ಎಸ್ಪಿ) ಇಂದು ಅಧಿಕೃತವಾಗಿ ಸೀಟು ಹಂಚಿಕೆ ಮಾಡಿಕೊಂಡಿವೆ. ಅದರಂತೆ 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿ 38 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ, ಎಸ್ಪಿ 37 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಈ ಮೊದಲು ತಲಾ 38 ಸೀಟುಗಳನ್ನು ಸಮನಾಗಿ ಹಂಚಿಕೆ ಮಾಡಿಕೊಳ್ಳಲು ಎರಡು ಪಕ್ಷಗಳು ನಿರ್ಧಾರ ಮಾಡಿದ್ದವು. ಆದರೆ, ತನ್ನ ಕೋಟಾದಲ್ಲಿ ಒಂದು ಸೀಟನ್ನು ಎಸ್ಪಿ ಬಿಟ್ಟುಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಲೋಕದಳ ಕನಿಷ್ಠ ಮೂರು ಮೂರು ಸೀಟುಗಳಿಗೆ ಬೇಡಿಕೆ ಇಟ್ಟಿತ್ತು.
ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಸಹಿ ಮಾಡಿ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ವಾರಾಣಸಿ ಕ್ಷೇತ್ರದಿಂದ ಎಸ್ಪಿ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. ಪ್ರಸ್ತುತ ಈ ಕ್ಷೇತ್ರದ ಹಾಲಿ ಸಂಸದ ಪ್ರಧಾನಿ ನರೇಂದ್ರ ಮೋದಿ. ಅದೇ ರೀತಿ ಯೋಗಿ ಆದಿತ್ಯನಾಥ ಅವರು ಸ್ಪರ್ಧೆ ಮಾಡುತ್ತಿದ್ದ ಗೋರಖ್ಪುರ ಕೂಡ ಸಮಾಜವಾದಿ ಪಕ್ಷದ ಪಾಲಾಗಿದೆ. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಇಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆದಿತ್ತು.
ಎರಡು ಪಕ್ಷಗಳು ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ಎರಡು ಕ್ಷೇತ್ರಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ಸ್ಪರ್ಧೆ ಮಾಡುವ ಕ್ಷೇತ್ರಗಳಾಗಿವೆ.
ಕೈರಾನ, ಮೊರಾದಾಬಾದ್, ಸಂಭಾಲ್, ರಾಮ್ಪುರ, ಮೈನ್ಪುರಿ, ಫಿರೋಜಾಬಾದ್, ಬದೌನ್, ಬರೇಲಿ, ಲಕ್ನೊ, ಇತವಾಹ್, ಕನ್ಪುರ್, ಕನ್ನೌಜ್, ಝಾನ್ಸಿ, ಬಂದಾ, ಅಲಹಾಬಾದ್, ಕೌಸಂಬಿ, ಫೌಲಬಾದ್, ಗೊಂಡಾ, ಗೋರಖ್ಪುರ, ಅಜಂಗರ್, ವಾರಾಣಸಿ ಮತ್ತು ಮಿರ್ಜಾಪುರ ಕೋಟಾ ಸೇರಿ ಎಸ್ಪಿ 37 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.
ಸಹರನಪುರ್, ಬಿನ್ಜೋರ್, ನಾಗಿನಾ, ಅಲಿಗರ್, ಆಗ್ರಾ, ಫತೇಪುರ್ ಸಿಖ್ರಿ, ಧಹುರಾಹಾರ, ಸೀತಾಪುರ್, ಸುಲ್ತಾನ್ಪುರ್, ಪ್ರತಾಪ್ಗರ್, ಕೈಸರ್ಗಂಜ್, ಬಸ್ತಿ, ಸಲೀಂಪುರ್, ಜೌನಾಪುರ್, ಭಡೊಯಿ ಮತ್ತು ಡೋರಿಯಾ ಕ್ಷೇತ್ರಗಳಿಂದ ಬಿಎಸ್ಪಿ ಕಣಕ್ಕಿಳಿಯಲಿದೆ.
ಅಂತಿಮ ಕ್ಷಣದ ಬದಲಾವಣೆ ಹೊರತುಪಡಿಸಿ, ಈ ಮೈತ್ರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಅವಕಾಶ ನೀಡಿಲ್ಲ. ಆದರೆ, ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶ (ಪೂರ್ವ) ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಎಸ್ಪಿ ಮತ್ತು ಬಿಎಸ್ಪಿ ಪಾಳಯದಲ್ಲಿ ಕಾಂಗ್ರೆಸ್ ಬಗ್ಗೆ ಮರುಯೋಚಿಸುವಂತೆ ಮಾಡಿದೆ. ಆದರೆ, ಮಾಯಾವತಿ ಅವರು ಕಾಂಗ್ರೆಸ್ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ನಿರಂತರವಾಗಿ ದಾಳಿಗಳನ್ನು ಮುಂದುವರೆಸಿಕೊಂಡೇ ಬರುತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಉತ್ತರಪ್ರದೇಶದ 80 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದಾರೆ.
ರಾಜಕೀಯವಾಗಿ ಪುನರ್ಜನ್ಮ ಪಡೆಯುತ್ತಿರುವ ಕಾಂಗ್ರೆಸ್ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯ ಮತಗಳನ್ನು ವಿಭಜನೆ ಮಾಡಿ, ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದೆಯಾ ಎಂಬ ಪ್ರಶ್ನೆ ಏಳುತ್ತದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಯಾವತಿ ಮತ್ತು ಅಖಿಲೇಶ್ ಯಾದವ್, ರಾಜ್ಯದಲ್ಲಿ ಕಾಂಗ್ರೆಸ್ ಮೇಲ್ಜಾತಿಯ ಮತಗಳನ್ನು ಮಾತ್ರ ಪಡೆದುಕೊಳ್ಳಲಿದೆ. ಇದು ಬಿಜೆಪಿಗೆ ಹೊಡೆತ ನೀಡಲಿದೆ ಅಷ್ಟೇ ಎಂದು ಹೇಳಿದ್ದಾರೆ.
Comments are closed.