ಮೇಘಾಲಯ: ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಾಶ್ಮೀರಿಗಳ ಎಲ್ಲ ಸರಕು ಸಾಗಣೆಯನ್ನು ನಿರ್ಬಂಧಿಸುವಂತೆ ಹಾಗೂ ಜನರು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳದಂತೆ ಮೇಘಾಲಯ ರಾಜ್ಯಪಾಲ ತಥಾಗತ ರಾಯ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
‘ಕಾಶ್ಮೀರಿಗಳ ಎಲ್ಲವನ್ನೂ ಬಹಿಷ್ಕರಿಸಿ, ಕಾಶ್ಮೀರ ಮಾರುಕಟ್ಟೆ ಅಥವಾ ವ್ಯಾಪಾರಿಗಳಿಂದ ಯಾವುದೇ ಸರಕುಗಳನ್ನು ಕೊಳ್ಳಬೇಡಿ, ಮುಂದಿನ ಎರಡು ವರ್ಷಗಳ ಕಾಲ ಕಾಶ್ಮೀರ , ಪವಿತ್ರ ಹಿಂದೂ ಕ್ಷೇತ್ರ ಅಮರನಾಥಕ್ಕೆ ಹೋಗಬೇಡಿ ಎಂದು ಅವರು ಟ್ವೀಟ್ ಸಂದೇಶದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು- ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಿಮ್ಮ ವಿದ್ಯುತ್ ಗಾಗಿ ನಮ್ಮ ನದಿ ನೀರನ್ನು ಬಳಸುವುದನ್ನು ಏಕೆ ನಿಲ್ಲಿಸುತ್ತಿಲ್ಲ ಎಂದು ಪ್ರಶ್ನಿಸಿದ್ದು, ತಥಾಗತ ರಾಯ್ ಅಂತವರಿಗೆ ಕಾಶ್ಮೀರ ಬೇಕು ಆದರೆ, ಕಾಶ್ಮೀರಿಗಳು ಬೇಕಾಗಿಲ್ಲ ಎಂದಿದ್ದಾರೆ.
ಭಾರತೀಯ ಸಂವಿಧಾನದಲ್ಲಿ ಕಾಶ್ಮೀರದ ಅವಿಭಾಜ್ಯ ಅಂಗ ಎಂಬುದನ್ನು ಓದಿದ್ದೇನೆ. ಎಲ್ಲಾ ಕಾಶ್ಮೀರಿಗಳು ನಮ್ಮ ನಾಗರಿಕರಾಗಿದ್ದಾರೆ. ಯಾವ ಸಂವಿಧಾನದಲ್ಲಿ ನೀವು ಪ್ರತಿಜ್ಞೆ ಸ್ವೀಕರಿಸಿದ್ದೀರಿ ರಾಜ್ಯಪಾಲರೇ ಎಂದು ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ ತಥಾಗತ ರಾಯ್, ಭಾರತೀಯ ಸೇನೆಯ ನಿವೃತ್ತ ನೌಕರರ ಕಾಲೋನಿಯಿಂದ ಈ ಸಲಹೆ ಬಂದಿದೆ ಎಂದು ಹೇಳಿದ್ದಾರೆ. ನೂರಾರು ಹುತಾತ್ಮ ಯೋಧರ ಹತ್ಯೆಗೆ ಇಂದು ಸಂಪೂರ್ಣವಾಗಿ ಅಹಿಂಸಾತ್ಮಕ ಪ್ರತಿಕ್ರಿಯೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶಿವಸೇನಾ ಎಂಎಲ್ ಸಿ ಹಾಗೂ ವಕ್ತಾರ ಮನಿಷಾ ಕಾಯಂಡೆ ಕೂಡಾ, ಭಾರತೀಯರು ಮತ್ತು ಪ್ರವಾಸೋದ್ಯಮ ಕಂಪನಿಗಳು ಎರಡು ವರ್ಷಗಳ ಕಾಲ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳುವುದನ್ನು ನಿರ್ಬಂಧಿಸುವಂತೆ ಮನವಿ ಮಾಡಿಕೊಂಡಿದ್ದರು.
Comments are closed.