ರಾಷ್ಟ್ರೀಯ

ಪುಲ್ವಾಮದಲ್ಲಿ ನೆನಪು ಮಾಸುವ ಮುನ್ನವೇ ಮತ್ತೆ ಉಗ್ರರ ಅಟ್ಟಹಾಸ; ರಾತ್ರೋರಾತ್ರಿ 4 ಸೈನಿಕರು ಹುತಾತ್ಮ

Pinterest LinkedIn Tumblr

ಪುಲ್ವಾಮ: ಫೆಬ್ರವರಿ 14ರ ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಉಗ್ರರ ಅಟ್ಟಹಾಸಕ್ಕೆ ಓರ್ವ ಮೇಜರ್ ಸೇರಿದಂತೆ ಭಾರತೀಯ ಸೇನೆಯ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದು, ಪುಲ್ವಾಮದ ಪಿಂಗ್ಲಾ ಪ್ರಾಂತ್ಯದಲ್ಲಿ ಉಗ್ರರು ಹಾಗೂ ಸೈನಿಕರ ನಡುವೆ ಭೀಕರ ಚಕಮಕಿ ನಡೆಯುತ್ತಿದ್ದು, ಈ ವೇಳೆ ಸೇನೆಯ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಅಂತೆಯೇ ಹಲವು ಸೈನಿಕರು ಗಾಯಗೊಂಡಿದ್ದು, ಗಾಯಾಳು ಸೈನಿಕರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಿಂಗ್ಲಾ ಪ್ರಾಂತ್ಯದಲ್ಲಿ 4ಕ್ಕೂ ಅಧಿಕ ಉಗ್ರರು ಅಡಗಿರುವ ಶಂಕೆ ಮೇರೆಗೆ ಅಲ್ಲಿ ಸೇನೆ ಶೋಧ ಕಾರ್ಯಕ್ಕೆ ಮುಂದಾಗಿತ್ತು. ಈ ವೇಳೆ ಸೈನಿಕರು ಆಗಮಿಸುತ್ತಿದ್ದಂತೆಯೇ ಅಡಗಿದ್ದ ಉಗ್ರರು ಏಕಾಏಕಿ ಸೈನಿಕರತ್ತ ಗುಂಡಿನ ಸುರಿಮಳೆ ಗರೆದಿದ್ದಾರೆ. ಈ ವೇಳೆ ಸ್ಥಳದಲ್ಲೇ ನಾಲ್ಕು ಮಂದಿ ಸೈನಿಕರ ಸಾವನ್ನಪ್ಪಿದ್ದು, ಈ ಪೈಕಿ ಓರ್ವ ಮೇಜರ್ ಹುದ್ದೆಯ ಸೈನಿಕಾಧಿಕಾರಿ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಹುತಾತ್ಮ ಯೋಧರನ್ನು ಮೇಜರ್ ವಿ ಎಸ್ ಧೌಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಅಜಯ್ ಕುಮಾರ್ ಮತ್ತು ಸಿಪಾಯಿ ಹರಿ ಸಿಂಗ್ ಎಂದು ಗುರುತಿಸಲಾಗಿದೆ. ಘಟನಾ ಪ್ರದೇಶದಲ್ಲಿ ಎನ್ಕೌಂಟರ್ ಕಾರ್ಯಾಚರಣೆ ಮುಂದುವರೆದಿದೆ.

Comments are closed.