ನವದೆಹಲಿ: ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣಗುಂಜ್ನಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.
ಕೋಲ್ಕತ್ತದಿಂದ 120 ಕಿ.ಮೀ.ದೂರದಲ್ಲಿರುವ ನಾಡಿಯಾ ಜಿಲ್ಲೆಯ ಕೃಷ್ಣಗಂಜ್ನಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಬಿಸ್ವಾಸ್ ಪಾಲ್ಕೊಂಡಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಬಿಸ್ವಾಸ್ ಅವರಿಗೆ ಗುಂಡು ಹಾರಿಸಲಾಗಿದೆ.
ನಾಡಿಯಾ ಜಿಲ್ಲೆ ಬಾಂಗ್ಲಾದೇಶ ಗಡಿಯಲ್ಲಿದೆ. ಮತ್ತು ಇತ್ತೀಚೆಗೆ ಈ ಭಾಗವನ್ನು ಬಿಜೆಪಿ ರಾಜಕೀಯವಾಗಿ ಅತಿಕ್ರಮಿಸಿಕೊಂಡಿದೆ. ಸತ್ಯಜಿತ್ ಬಿಸ್ವಾಸ್ ಮಾಥುರ್ ಸಮುದಾಯಕ್ಕೆ ಸೇರಿದವರು. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಬಿಸ್ವಾಸ್ ಶಾಸಕರಾಗಿದ್ದರು. ಇದೊಂದು ರಾಜಕೀಯಪ್ರೇರಿತ ಕೊಲೆ ಎಂದು ಟಿಎಂಸಿ ಪಕ್ಷ ಆರೋಪ ಮಾಡಿದೆ.
ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಶಾಸಕನನ್ನು ಕೊಂದ ಬಳಿಕ ಅಲ್ಲಿ ನೆರೆದಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಆರೋಪಿ ಹುಡುಕಾಟ ನಡೆದಿದೆ. ಕಾರ್ಯಕ್ರಮದ ವೇದಿಕೆ ಬಳಿಗೆ ಶಾಸಕ ಬಿಸ್ವಾಸ್ ಹತ್ತಿರವಾಗುತ್ತಿದಂತೆ ಕೊಲೆಗಾರ ಹಲವು ಸುತ್ತು ಗುಂಡು ಹಾರಿಸುವ ಮೂಲಕ ಶಾಸಕರನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆಯುವ ವೇಳೆ 37 ವರ್ಷದ ಬಿಸ್ವಾಸ್ ಜೊತೆಗೆ ಸಚಿವರಾದ ರತ್ನ ಘೋಷ್ ಮತ್ತು ಟಿಎಂಸಿ ಪಕ್ಷದ ಜಿಲ್ಲಾಧ್ಯಕ್ಷ ಗೌರಿಶಂಕರ್ ದತ್ ಜೊತೆಗಿದ್ದರು. ಇತ್ತೀಚೆಗಷ್ಟೇ ಶಾಸಕ ಬಿಸ್ವಾಸ್ ಮದುವೆಯಾಗಿದ್ದರು.
Comments are closed.