ರಾಷ್ಟ್ರೀಯ

ವೀರಸಾವರ್ಕರ್‌ ಒಬ್ಬ ಹೇಡಿ; ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ರಾಹುಲ್‌ ವಿರುದ್ಧ ಕೇಸು ದಾಖಲು

Pinterest LinkedIn Tumblr

ಮುಂಬೈ: ಸ್ವಾತಂತ್ರ ಸೇನಾನಿ ವೀರಸಾವರ್ಕರ್‌ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನವದಿಲ್ಲಿಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ಭಾಷಣದ ವೇಳೆ ವೀರಸಾವರ್ಕರ್‌ ಒಬ್ಬ ಹೇಡಿ ಎಂದು ಜರಿದಿದ್ದರು.

ಸಾವರ್ಕರ್ ಅವರನ್ನು ಒಬ್ಬ ಹೇಡಿ ಎಂದು ಅವಹೇಳನಾಕಾರಿಯಾಗಿ ಕರೆಯುವ ಮೂಲಕ ರಾಹುಲ್ ಗಾಂಧಿ, ಖಾಸಗಿ ವ್ಯಕ್ತಿಗಳ ಭಾವನೆಗಳಿಗೆ ದಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾವರ್ಕರ್ ವಿರುದ್ಧದ ಹೇಳಿಕೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಲಾಗಿದೆ. ಸಾವರ್ಕರ್ ಅವರನ್ನು 1911ರಲ್ಲಿ ಅಂಡಮಾನ್ ನಲ್ಲಿರುವ ಸೆಲ್ಯೂಲರ್ ಜೈಲಿಗೆ ಕಳುಹಿಸಿದಾಗ ತನ್ನ ರಕ್ಷಣೆಗಾಗಿ ಬ್ರಿಟಿಷರ ಬಳಿ ಅಂಗಲಾಚಿದ್ದರು ಎಂದು ಕಳೆದ ನವೆಂಬರ್ ತಿಂಗಳಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಾವರ್ಕರ್ ಅವರ ಕುಟುಂಬದಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ವೀರ ಸೇನಾನಿಯಾಗಿರುವ ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ದುರುದ್ದೇಶ ಹಾಗೂ ಸಂಪೂರ್ಣ ತಪ್ಪಿನಿಂದ ಕೂಡಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೀರ ಸಾವರ್ಕರ್ ಸಹೋದರನ ಮೊಮ್ಮಗ ರಂಜಿತ್ ಸಾವರ್ಕರ್ ಮುಂಬೈಯ ಶಿವಾಜಿ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಂತರ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ರಂಜಿತ್, ಸಾವರ್ಕರ್ ಬ್ರಿಟಿಷರಿಂದ 27 ವರ್ಷ ಜೈಲುಶಿಕ್ಷೆ ಅನುಭವಿಸಿದ್ದಾರೆ. ಇಂತಹವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರಿಂದ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿಸಿದರು.

Comments are closed.