ಭೋಪಾಲ್: ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸುದ್ದಿಯಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಹಿಮ್ಮತ್ ಪಾಟೀದಾರ್ನ ಹತ್ಯೆ ಪ್ರಕರಣದಲ್ಲಿ ಈಗ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ. ರತ್ಲಮ್ ಜಿಲ್ಲೆಯ 36 ವರ್ಷದ ಹಿಮ್ಮತ್ ಜೀವಂತವಾಗಿರುವ ವಿಷಯ ಬೆಳಕಿಗೆ ಬಂದಿದೆ. ವಾಸ್ತವವಾಗಿ ಕೊಲೆಯಾಗಿದ್ದೇ ಬೇರೆ. ಇನ್ಷೂರೆನ್ಸ್ ಹಣಕ್ಕಾಗಿ ಹಿಮ್ಮತ್ ಪಾಟೀದಾರ್ ಸೃಷ್ಟಿಸಿದ ಮಹಾ ನಾಟಕ ಅದಾಗಿತ್ತು. ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮದನ್ ಮಾಳವೀಯ(32) ಎಂಬಾತನನ್ನು ಹತ್ಯೆ ಮಾಡಿ, ಆ ಶವ ತನ್ನದೆಂದು ಹಿಮ್ಮತ್ ಬಿಂಬಿಸಿದ್ದನೆಂದು ಪೊಲೀಸರು ಹೇಳಿದ್ದಾರೆ. ಶವದ ಡಿಎನ್ಎ ಪರೀಕ್ಷೆಯಲ್ಲೂ ಇದು ರುಜುವಾತಾಗಿದೆ. ಪರಾರಿಯಾಗಿರುವ ಹಿಮ್ಮತ್ ಪಾಟೀದಾರ್ನನ್ನು ಪೊಲೀಸರು ಸದ್ಯ ಹುಡುಕುತ್ತಿದ್ದಾರೆ.
ಜನವರಿ 23ರಂದು ರತ್ಲಮ್ ಜಿಲ್ಲೆಯ ಕಾಮೆದ್ ಎಂಬ ಗ್ರಾಮದ ಹೊಲದಲ್ಲಿ ಶವವೊಂದು ಪತ್ತೆಯಾಗಿರುತ್ತದೆ. ಕತ್ತು ಸೀಳಿ ಕೊಲೆ ಮಾಡಲಾಗಿರುತ್ತದೆ. ಮುಖವನ್ನು ಗುರುತು ಸಿಗದಂತೆ ಸುಟ್ಟುಹಾಕಲಾಗಿರುತ್ತದೆ. ಆದರೆ, ದೇಹದ ಆಕಾರ, ಬಟ್ಟೆ ಎಲ್ಲವೂ ಹಿಮ್ಮತ್ ಪಾಟೀದಾರ್ಗೆ ಹೋಲಿಕೆಯಾಗಿರುತ್ತದೆ. ಹಿಮ್ಮತ್ ಪಾಟೀದಾರ್ ಅವರ ತಂದೆಯು ತಮ್ಮ ಮಗ ಕೊಲೆಯಾಗಿದ್ಧಾನೆಂದು ಪೊಲೀಸರಿಗೆ ದೂರು ಕೊಡುತ್ತಾರೆ. ಅಲ್ಲಿಗೆ, ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ ಎಂದು ಈ ಪ್ರಕರಣವು ರಾಜಕೀಯ ಬಣ್ಣ ಪಡೆಯುತ್ತದೆ. ವಿಪಕ್ಷದಲ್ಲಿರುವ ಬಿಜೆಪಿಗೆ ಸರಕಾರದ ಮೇಲೆ ಹರಿಹಾಯಲು ಹೊಸ ಅಸ್ತ್ರ ಸಿಗುತ್ತದೆ. ಬಿಜೆಪಿ ನಾಯಕರು ಹೇಳಿಕೆ ಮೇಲೆ ಹೇಳಿಕೆ ಕೊಟ್ಟು ಕಾಂಗ್ರೆಸ್ ಸರಕಾರದ ಮೇಲೆ ವಾಗ್ದಾಳಿ ನಡೆಸುತ್ತಾರೆ.
ಆದರೆ, ಕೆಲವೇ ದಿನಗಳಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ಸಂಶಯಗಳು ಕಾಣತೊಡಗುತ್ತವೆ. ಶವದ ಸಮೀಪದಲ್ಲಿ ಡೈರಿಯೊಂದು ಹಲವು ಸುಳಿವನ್ನು ಬಿಟ್ಟುಕೊಡುತ್ತದೆ. ಆ ಡೈರಿಯಲ್ಲಿ ಪಾಟೀದಾರ್ನ ಇನ್ಷೂರೆನ್ಸ್ ಪಾಲಿಸಿ ನಂಬರ್, ಬ್ಯಾಂಕ್ನ ಫಿಕ್ಸೆಡ್ ಡೆಪಾಸಿಟ್, ಪಿನ್ ನಂಬರ್ ಇತ್ಯಾದಿ ವಿವರಗಳಿರುತ್ತವೆ. ಅಷ್ಟೇ ಅಲ್ಲದೆ, ಶವದಲ್ಲಿದ್ದ ಮೊಬೈಲ್ ಫೋನ್ನಲ್ಲಿ ದೂರವಾಣಿ ಕರೆಯ ವಿವರವನ್ನೆಲ್ಲಾ ಅಳಿಸಿಹಾಕಲಾಗಿರುತ್ತದೆ. ಇದು ಪೊಲೀಸರಿಗೆ ಸಂಶಯದ ವಾಸನೆ ಬಿತ್ತಿ, ಶವದ ಡಿಎನ್ಎ ಪರೀಕ್ಷೆಗೆ ದಾರಿ ಮಾಡಿಕೊಡುತ್ತದೆ.
ಶವದ ಡಿಎನ್ಎಗೂ ಹಿಮ್ಮತ್ ಪಾಟೀದಾರ್ನ ತಂದೆಯ ಡಿಎನ್ಎಗೂ ಹೊಂದಿಕೆಯಾಗುವುದಿಲ್ಲ. ಆಗ ಪೊಲೀಸರಿಗೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಂತಾಗುತ್ತದೆ. ಈ ಹತ್ಯೆ ಘಟನೆ ನಡೆಯುವ ಒಂದು ದಿನ ಮೊದಲಷ್ಟೇ ಪಾಟೀದಾರ್ನ ತೋಟದಲ್ಲಿ ಕೆಲಸ ಮಾಡುವ ಕೂಲಿ ಮದನ್ ಮಾಳವೀಯ ಎಂಬಾತ ನಾಪತ್ತೆಯಾಗಿರುತ್ತಾನೆ. ಈ ಕೂಲಿಕಾರನ ಸಂಬಂಧಿಕರ ಡಿಎನ್ಎ ಜೊತೆ ತಾಳೆ ಮಾಡುತ್ತಾರೆ. ಆಗ ಎರಡೂ ಡಿಎನ್ಎ ಹೊಂದಿಕೆಯಾಗುವುದರೊಂದಿಗೆ ಪೊಲೀಸರಿಗೆ ಸ್ಪಷ್ಟ ಸುಳಿವು ಸಿಕ್ಕುತ್ತದೆ. ನಂತರ, ಮದನ್ ಹೆಂಡತಿ ಕೂಡ ಶವದ ಗುರುತು ಹಿಡಿದು ಅದು ತನ್ನ ಗಂಡನದೇ ಎಂದು ಪತ್ತೆ ಹಚ್ಚುತ್ತಾರೆ.
ಇನ್ಷೂರೆನ್ಸ್ಗಾಗಿ ನಡೆದ ಕೊಲೆ:
ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಹಿಮ್ಮತ್ ಪಾಟೀದಾರ್, ಈ ಸಮಸ್ಯೆಯಿಂದ ಹೊರಬರಲು ಮಹಾ ಷಡ್ಯಂತ್ರ ರಚಿಸುತ್ತಾನೆ. 20 ಲಕ್ಷ ಮೊತ್ತದ ಇನ್ಷೂರೆನ್ಸ್ ಪಡೆಯಲು ತನ್ನ ಸಾವಿನ ನಾಟಕ ಆಡಿದ್ದಾನೆಂಬುದು ಪೊಲೀಸರ ಶಂಕೆ. ಅದಕ್ಕಾಗಿ ತನ್ನ ತೋಟದಲ್ಲಿ ಕೆಲಸ ಮಾಡುವ ಮದನ್ನನ್ನು ಹತ್ಯೆ ಮಾಡಿ, ಅದು ತನ್ನದೇ ಶವ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಾನೆ. ತನ್ನ ಕೆಲ ವಸ್ತುಗಳನ್ನ ಶವದ ಬಳಿ ಬೇಕಂತಲೇ ಬಿಟ್ಟು ಹೋಗುತ್ತಾನೆ. ಆದರೆ, ಶವದ ಬಟ್ಟೆಯನ್ನ ಬದಲಿಸುವ ಹಿಮ್ಮತ್, ಚೆಡ್ಡಿಯನ್ನ ಮಾತ್ರ ಹಾಗೆಯೇ ಬಿಟ್ಟಿರುತ್ತಾನೆ. ಪ್ರಕರಣದಲ್ಲಿ ಸುಳಿವು ನೀಡಿದವುಗಳಲ್ಲಿ ಈ ಚೆಡ್ಡಿಯೂ ಒಂದು. ಆದರೆ, ಪೊಲೀಸರಿಗೆ ಸದ್ಯಕ್ಕೆ ಸ್ಪಷ್ಟವಾಗಿರುವ ಸಂಗತಿ ಎಂದರೆ ಕೊಲೆಯಾಗಿರುವುದು ಮದನ್ ಮಾಳವೀಯ ಎಂಬ ವ್ಯಕ್ತಿ. ಹಾಗೆಯೇ, ಶವಕ್ಕೆ ಹಿಮ್ಮತ್ನ ಬಟ್ಟೆಗಳನ್ನ ತೊಡಿಸಿ ಬೇರೆಯೇ ಸಂಚು ರೂಪಿಸಿರುವುದು ಖಚಿತವಾಗಿದೆ.
ಈಗ ನಾಪತ್ತೆಯಾಗಿರುವ ಹಿಮ್ಮತ್ ಪಾಟೀದಾರ್ನನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ. ಈತನ ಸುಳಿವು ನೀಡಿದವರಿಗೆ 10 ಸಾವಿರ ರೂ ಬಹುಮಾನ ಕೊಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಈ ಮಹಾ ನಾಟಕದಲ್ಲಿ ಹಿಮ್ಮತ್ನ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರಾ ಎಂಬ ದೃಷ್ಟಿಯಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯಾರು ಈ ಹಿಮ್ಮತ್?
ಹಿಮ್ಮತ್ ಪಾಟೀದಾರ್ ಮತ್ತವನ ಕುಟುಂಬದವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದಾರೆ. ಹಿಮ್ಮತ್ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದರಾದರೂ ಸಕ್ರಿಯ ಕಾರ್ಯಕರ್ತನಾಗಿರಲಿಲ್ಲ. ಈತನ ಸೋದರ ಸಂಜಯ್ ಪಾಟೀದಾರ್ ಆರೆಸ್ಸೆಸ್ ವಾದ್ಯಗೋಷ್ಠಿಯೊಂದಿಗೆ ಜೋಡಿತವಾಗಿದ್ದಾರೆನ್ನಲಾಗಿದೆ.
Comments are closed.