ಬೆಂಗಳೂರು: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಮಹಾಗಠಬಂಧನ ರಾರಯಲಿಗೆ ಭಾಗವಹಿಸುವಂತೆ ಜನರಿಗೆ ಒತ್ತಡ ಹೇರಲಾಗಿತ್ತು. ಬಂದೂಕು ಹಿಡಿದು ಬೆದರಿಕೆ ಹಾಕಲಾಗಿತ್ತು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮುಖಕ್ಕೆ ಬಟ್ಟೆಕಟ್ಟಿರುವ ವ್ಯಕ್ತಿಯೊಬ್ಬ ಗನ್ ಹಿಡಿದು ಬೆದರಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ, ‘ಕೊಲ್ಕತ್ತಾಲದಲ್ಲಿ ನಡೆದ ಮಹಾಗಠಬಂದನ ರಾರಯಲಿಗೆ ಜನರನ್ನು ಒಟ್ಟು ಹಾಕಿದ್ದು ಹೀಗೆ. ಇಂಥವರ ಕೈಯಲ್ಲಿ ಸರ್ಕಾರ ಕೊಟ್ಟು ಏನು ಮಾಡುತ್ತೀರಿ ನೀವೇ ಯೋಚನೆ ಮಾಡಿ’ ಎಂದು ಒಕ್ಕಣೆ ಬರೆದು ಶೇರ್ ಮಾಡಲಾಗುತ್ತಿದೆ. ‘ಅನ್ ಟೋಲ್ಡ್ ಸ್ಟೋರಿ’ ಎಂಬ ಫೇಸ್ಬುಕ್ ಪೇಜ್ನಲ್ಲಿ ಹಾಕಲಾಗಿದ್ದ ಈ ವಿಡಿಯೋವು 3000 ಬಾರಿ ವೀಕ್ಷಣೆಯಾಗಿದೆ.
ಕೇವಲ ಫೇಸ್ಬುಕ್ ಮಾತ್ರವಲ್ಲದೆ ಟ್ವೀಟರ್ನಲ್ಲೂ ಈ ವಿಡಿಯೋ ವೈರಲ್ ಆಗಿದೆ. ಆದರೆ ನಿಜಕ್ಕೂ ಹೆದರಿಸಿ, ಬೆದರಿಸಿ ಮಹಾಗಠಬಂಧನ ರಾರಯಲಿಗೆ ಜನರನ್ನು ಸೇರಿಸಲಾಗಿತ್ತೇ ಎಂದು ಆಲ್ಟ್ ನ್ಯೂಸ್ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲಿಸಿದಾಗ ಇದು 2014ರ ವಿಡಿಯೋ ಎಂದು ತಿಳಿದುಬಂದಿದೆ. ಇದೇ ವಿಡಿಯೋವನ್ನು ಇಂಡಿಯಾ ಟುಡೇ ಸುದ್ದಿವಾಹಿನಿಯು 2014ರಲ್ಲಿ ಪ್ರಸಾರ ಮಾಡಿತ್ತು.
ಅದರಲ್ಲಿ ಪಶ್ಚಿಮ ಬಂಗಾಳದ ಬಂಕುರ್ ಜಿಲ್ಲೆಯ ಪಂಚಾಯತ್ ಚುನಾವಣೆಯ ನಾಮಪತ್ರ ಸಲ್ಲಿಸುವ ಕೊನೆಯ ದಿನ ಜನರೆಡೆಗೆ ಬಂದೂಕು ತೋರಿಸಲಾಗಿತ್ತು ಎಂದು ಹೇಳಲಾಗಿದೆ. ಅಲ್ಲದೆ 24 ಏಪ್ರಿಲ್ 2018ರಂದು ಕೂಡ ಇಂಡಿಯಾ ಟುಡೇ ವಾಹಿನಿ ಇದೇ ವಿಡಿಯೋವನ್ನು ಪ್ರಸಾರ ಮಾಡಿ, ಈ ಬಾರಿಯು ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ಮತ್ತೆ ಹಿಂಸಾಚಾರ ಎಂದು ವರದಿ ಮಾಡಿದೆ. ಸದ್ಯ ಅದೇ ವಿಡಿಯೋವನ್ನು ಪೋಸ್ಟ್ ಮಾಡಿ ಮಹಾಗಠಬಂದನ ರಾರಯಲಿಗೆ ಬೆದರಿಸಿ ಜನರನ್ನು ಕರೆತರಲಾಗಿತ್ತು ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.
– ವೈರಲ್ ಚೆಕ್
Comments are closed.