ನವದೆಹಲಿ: ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿಯೂ ಮತ್ತೆ ಗೆಲ್ಲುವ ಭರವಸೆಯಲ್ಲಿದೆ. ಈ ಮಧ್ಯೆ ಒಂದರ ಮೇಲೆ ಒಂದರಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರ ಬೀಳುತ್ತಿವೆ. ಈಗ ಫಸ್ಟ್ಪೋಸ್ಟ್ ನಡೆಸಿದ ‘ನ್ಯಾಷನಲ್ ಟ್ರಸ್ಟ್ ಸರ್ವೆ’ ಬಹಿರಂಗ ಗೊಂಡಿದ್ದು, ಪ್ರಧಾನಿ ಮೋದಿ ವರ್ಚಸ್ಸಿಗೆ ಯಾವುದೇ ಕುತ್ತು ಎದುರಾಗದು ಎಂದು ಹೇಳಿದೆ.
ಭಾರತದ 23 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಒಟ್ಟು ಲೋಕಸಭಾ ಕ್ಷೇತ್ರಗಳ ಪೈಕಿ ಶೇ. 60 ಕ್ಷೇತ್ರಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತಮ ಎಂದು ಶೇ. 52.2 ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 26.8 ಜನರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರ ಒಲವು ತೋರಿದ್ದಾರೆ.
ಇನ್ನು, ಪ್ರಧಾನಿ ಹುದ್ದೆ ರೇಸ್ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಮೊದಲಾದವರ ಹೆಸರು ಕೇಳಿಬಂದಿತ್ತು. ಅವರ ಪರ ಬೆರಳೆಣಿಕೆಯಷ್ಟು ಜನ ಒಲವು ತೋರಿದ್ದಾರೆ. ಮಮತಾ ಪರ ಶೇ. 4.2, ಮಾಯವತಿ ಶೇ.2.8, ಪ್ರಿಯಾಂಕಾ ಗಾಂಧಿ ಶೇ.0.9 ಮತ ಚಲಾಯಿಸಿದ್ದಾರೆ.
ಇನ್ನು, ಜೆಡಿಎಸ್ ವರಿಷ್ಠ ಎಚ್ಡಿ ದೇವೆಗೌಡ ಅವರ ಪ್ರಧಾನಿಯಾಗಲಿ ಎಂದು ಕೇವಲ 0.7 ಜನರು ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಶೇ. 8 ಜನರು ಹೇಳಿದ್ದಾರೆ.
ಭ್ರಷ್ಟಾಚಾರ ತಡೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದ್ದಾರೆ. ಈ ವಿಚಾರವಾಗಿ ಸಮೀಕ್ಷೆಯಲ್ಲಿ ಜನರು ಮೋದಿ ಪರ ಬ್ಯಾಟ್ ಬೀಸಿದ್ದಾರೆ. ಭ್ರಷ್ಟಾಚಾರ ತಡೆ, ದೇಶದ ಬಗ್ಗೆ ಯಾರು ಹೆಚ್ಚು ಕಾಳಜಿ ಹೊಂದಿದ್ದಾರೆ, ಯಾರು ಬದಾಲಾವಣೆಯ ಹರಿಕಾರ ಮತ್ತಿತರ ಪ್ರಶ್ನೆಗಳಿಗೆ ರಾಹುಲ್ಗಿಂತ ಮೋದಿಯೇ ಹೆಚ್ಚು ಅಂಕ ಗಿಟ್ಟಿಸಿಕೊಂಡಿದ್ದಾರೆ.
ಇನ್ನು, ಮಹಾ ಮೈತ್ರಿಕೂಟ ರಚನೆಯಾದ ಕಾರಣ ಎನ್ಡಿಎ ಸರ್ಕಾರಕ್ಕೆ ಹಿನ್ನಡೆಯಗಾಲಿದೆ ಎನ್ನುವ ಮಾತು ಕೇಳಿ ಬಂದಿದ್ದವು. ಆದರೆ, ಈ ಸಮೀಕ್ಷೆ ಅದನ್ನು ಸುಳ್ಳು ಮಾಡಿದೆ. ಎನ್ಡಿಎ ಮೈತ್ರಕೂಟದ ಪರ ಶೇ.58 ಜನರು ಹಾಗೂ ಮಹಾಮೈತ್ರಿ ಪರ ಶೇ. 42 ಜರನು ಒಲವು ತೋರಿದ್ದಾರೆ.
Comments are closed.