ರಾಷ್ಟ್ರೀಯ

ನಾನಿನ್ನೂ ಬದುಕಿದ್ದೇನೆ ಎಂದು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದ 84ರ ವಯೋವೃದ್ದೆಯ ಕರುಣಾಜನಕ ಕಥೆ

Pinterest LinkedIn Tumblr


ನಾನಿನ್ನೂ ಬದುಕಿದ್ದೇನೆ ಎಂದು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದ ಮಹಿಳೆಯೊಬ್ಬರ ಕರುಣಾಜನಕ ಕಥೆ ಇದು. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ನಿವಾಸಿ ತೊಟ್ಟಿಯಮ್ಮಾಳ್ ಎಂಬ 84ರ ವಯೋವೃದ್ದೆ ಕಳೆದ ಕೆಲ ವರ್ಷಗಳಿಂದ ನಾನು ಸತ್ತಿಲ್ಲ ಎಂದು ಸಾಬೀತು ಪಡಿಸಲು ಹಲವು ಕಚೇರಿಗಳ ಮೆಟ್ಟಿಲು ಹತ್ತಿ ಇಳಿದಿದ್ದರು.

ತೊಟ್ಟಿಯಮ್ಮಾಳ್​ ಅವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಮುಕ್ಕಳು. ಅದರಲ್ಲಿ ಮಗ ಎ.ದಾಸ್ ಜತೆ ತೊಟ್ಟಿಯಮ್ಮಾಳ್​ ವಾಸವಾಗಿದ್ದರು. ಜಿಲ್ಲಾ ನ್ಯಾಯಾಲಯದಲ್ಲಿ ಶಿರಸ್ತೇದಾರನಾಗಿದ್ದ ಕೆಲಸ ಮಾಡುತ್ತಿದ್ದ ದಾಸ್ 2016 ರಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಆದರೆ ಅದಕ್ಕೂ ಮುನ್ನ ದಾಸ್ ತಾಯಿಗೆ ತಿಳಿಯದಂತೆ ಆಸ್ತಿಯನ್ನು ತನ್ನ ಮಕ್ಕಳ ಹೆಸರಿಗೆ ವರ್ಗಾಯಿಸಿ ಕೊಂಡಿದ್ದರು. 12 ಸೆಂಟ್ಸ್​ ಭೂಮಿಯನ್ನು ಹೊಂದಿದ್ದ ಈ ಹಿರಿ ಜೀವವನ್ನು ವಂಚಿಸಿದಲ್ಲದೇ, ಅವರ ಮೂವರು ಪುತ್ರಿಯರ ನಕಲಿ ಸಹಿ ಹಾಕಿ ಆಸ್ತಿಯನ್ನು ಲಪಟಾಯಿಸಿದ್ದರು. ಆದರೆ ಇದ್ಯಾವುದೂ ಕೂಡ ವಯೋವೃದ್ಧೆ ತೊಟ್ಟಿಯಮ್ಮಾಳ್​ಗೆ ತಿಳಿದಿರಲಿಲ್ಲ.

ಮಗನ ನಿಧನದ ನಂತರ ಮೊಮ್ಮಗ ಪ್ರವೀಣ್ ಮತ್ತು ಸೊಸೆ ಮೀನಾಕ್ಷಿ ತೊಟ್ಟಿಯಮ್ಮಾಳ್ ಜೀವಂತವಾಗಿದ್ದರೂ ಆಸ್ತಿಯನ್ನು ಪಡೆಯಲು ಕಾನೂನುಬದ್ಧವಾದ ವಾರಸಾ ಪತ್ರವನ್ನು ಹಾಜರುಪಡಿಸಿದ್ದರು. ಈ ವೇಳೆ ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ತೊಟ್ಟಿಯಮ್ಮಾಳ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು. ಅಷ್ಟೇ ಅಲ್ಲದೆ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಮೊರೆ ಹೋಗಿದ್ದರು. ಆದರೆ ಅದಾಗಲೇ ಸಿದ್ದಪಡಿಸಿದ್ದ ನಕಲಿ ಮರಣ ಪತ್ರದಿಂದ ತೊಟ್ಟಿಯಮ್ಮಾಳ್ ಇಕ್ಕಟಿಗೆ ಸಿಲುಕಿದರು. ಇದರಿಂದ ತಾನು ಬದುಕಿರುವುದನ್ನು ಸಾಬೀತು ಪಡಿಸುವುದು ಅನಿವಾರ್ಯವಾಗಿತ್ತು.

ಮೊದಲೇ ವಯಸ್ಸಾಗಿದ್ದ ತೊಟ್ಟಿಯಮ್ಮಾಳ್ ದಾಖಲೆಗಳನ್ನು ಹಿಡಿದು ಹಲವು ಕೇಂದ್ರ ಕಚೇರಿಗಳನ್ನು ಹತ್ತಿಳಿಯಬೇಕಾಯಿತು. ಆದರೆ ವಾರಗಳು ತಿಂಗಳು ಕಳೆದರೂ ತೊಟ್ಟಿಯಮ್ಮಾಳ್​ಗೆ ನ್ಯಾಯ ದೊರಕಿರಲಿಲ್ಲ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮದ್ರಾಸ್​ ಉಚ್ಛ ನ್ಯಾಯಾಲಯ ಮಾನವೀಯತೆಯನ್ನು ಮೆರೆದಿದೆ. 84 ರ ಹರೆಯದ ವೃದ್ಧೆಗೆ ರಕ್ಷಣೆ ನೀಡುವಂತೆ ಸೂಚಿಸಿದ್ದಲ್ಲದೇ, 2016, ಸೆ.27ರಂದು ನೀಡಲಾಗಿದ್ದ ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಆದೇಶಿಸಿದೆ. ಒಟ್ಟಿನಲ್ಲಿ ಬದುಕಿರುವಾಗಲೇ ತಾನು ಸತ್ತಿಲ್ಲ ಎಂಬುದನ್ನು ನಿರೂಪಿಸುವಂತಹ ಸನ್ನಿವೇಶ ಉಂಟಾಗಿದ್ದು ವಿಪರ್ಯಾಸ.

Comments are closed.