ನವದೆಹಲಿ: ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಅದರ ಪ್ರಚಾರದ ಸಿದ್ಧತೆಯನ್ನು ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಮಾಡಿಕೊಳ್ಳುತ್ತಿವೆ. ಫೆಬ್ರವರಿಯಲ್ಲಿ ಚುನಾವಣಾ ಪ್ರಚಾರ ಆರಂಭವಾಗಲಿದ್ದು, ಬಿಜೆಪಿಯನ್ನು ಎದುರಿಸಲು ಮಹಾಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತಿತರ ಪ್ರಾದೇಶಿಕ ಪಕ್ಷಗಳು ಗೆಲುವಿನ ನಿರೀಕ್ಷೆಯನ್ನು ಹೊತ್ತು ಕುಳಿತಿವೆ. ಆದರೆ, ಪ್ರಚಾರದ ವಿಷಯದಲ್ಲಿ ಅವರಿಗಿಂತ ಮುಂದಿರುವ ಬಿಜೆಪಿ ಕೇವಲ ಮಾನಸಿಕ ಸಿದ್ಧತೆಯನ್ನು ಮಾತ್ರವಲ್ಲದೆ ಚುನಾವಣಾ ಪ್ರಚಾರಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನೂ ಶುರುಮಾಡಿಕೊಂಡಿದೆ.
ಈ ಬಾರಿಯ ಲೋಕಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಶತಪ್ರಯತ್ನ ನಡೆಸುತ್ತಿದ್ದು, ಫೆಬ್ರವರಿಯಿಂದ ಕಾಂಗ್ರೆಸ್ ಪ್ರಚಾರ ಕಾರ್ಯ ಆರಂಭವಾಗಲಿದೆ. ಕಳೆದ ಬಾರಿಯ ಚುನಾವಣೆಯಂತೆ ಈ ಬಾರಿಯೂ ಎಲ್ಲ ರಾಜ್ಯಗಳಿಗೆ ತೆರಳಿ ಪ್ರಚಾರದಲ್ಲಿ ಭಾಗಿಯಾಗಲು ಬಿಜೆಪಿ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ವಿಮಾನಗಳನ್ನೂ ಬಿಜೆಪಿ ಈಗಾಗಲೇ ಬುಕ್ ಮಾಡಿದೆಯಂತೆ.
ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮ, ಬಿಜೆಪಿ ಎಲ್ಲ ಖಾಸಗಿ ವಿಮಾನಗಳನ್ನೂ ಬುಕ್ ಮಾಡಿಕೊಂಡಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ವಿಮಾನಗಳೇ ಸಿಗದಂತಾಗಿದೆ. ಬೇಕೆಂದೇ ಬಿಜೆಪಿ ಈ ರೀತಿ ಮಾಡಿದ್ದು, ಇದು ಸ್ಪರ್ಧಾತ್ಮಕ ಮನೋಭಾವವಲ್ಲ. ಆಡಳಿತ ಪಕ್ಷವಾಗಿರುವ ಬಿಜೆಪಿ ಉದ್ದೇಶಪೂರ್ವಕವಾಗಿ ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ಗೆ ವಿಮಾನಗಳು ಸಿಗದಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಆಡಳಿತ ಪಕ್ಷವಾಗಿರುವ ಬಿಜೆಪಿ ಲೋಕಸಭಾ ಚುನಾವಣಾ ಪ್ರಚಾರ ಮತ್ತು ಜಾಹೀರಾತಿಗೆಂದೇ 4 ಸಾವಿರ ಕೋಟಿಗೂ ಅಧಿಕ ಹಣವನ್ನು ಮೀಸಲಿಟ್ಟಿದೆ. ಅದಕ್ಕಿಂತಲೂ ಹೆಚ್ಚು ಹಣವನ್ನು ಬಹುರಾಷ್ಟ್ರೀಯ ಕಂಪನಿಗಳಾದ ನೆಟ್ಫ್ಲಿಕ್ಸ್, ಅಮೇಜಾನ್, ಯೂನಿಲಿವರ್ನಂತಹ ಸಂಸ್ಥೆಗಳಿಗೆ ಜಾಹೀರಾತಿಗಾಗಿ ನೀಡಿದೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಯಾವ ಮೂಲದಿಂದ ಸಂಗ್ರಹಿಸಲಾಗಿದೆ ಎಂಬುದು ಜನರಿಗೂ ಗೊತ್ತಾಗುತ್ತದೆ. ಸಾರ್ವಜನಿಕ ವಲಯದ ಹಣವನ್ನು ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
ನಮ್ಮನ್ನು ಯಾವ ರೀತಿ ಕಟ್ಟಿಹಾಕಲು ಪ್ರಯತ್ನಿಸಿದರೂ ಈ ಬಾರಿಯ ಚುನಾವಣೆಯಲ್ಲಿ ಗೆಲುವು ನಮ್ಮದೇ. ಬಿಜೆಪಿಯನ್ನು ಸೋಲಿಸುವುದು ಖಚಿತ. ಈ ದೇಶದ ಜನರ ಪ್ರೀತಿ ಮತ್ತು ಬೆಂಬಲದಿಂದ ನಾವು ಈ ಬಾರಿ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ ಎರಡನೇ ವಾರದಿಂದ ಕಾಂಗ್ರೆಸ್ ತನ್ನ ಪ್ರಚಾರಕಾರ್ಯವನ್ನು ಆರಂಭಿಸಲಿದೆ.
Comments are closed.