ನವದೆಹಲಿ: ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಿಸಿದ್ದ ಕನಕಾ ದುರ್ಗಾ ಈಗ ಮನೆಯವರಿಗೂ ಬೇಡವಾಗಿದ್ದಾರೆ. ಕುಟುಂಬದವರು ಕನಕರನ್ನು ಮನೆಯಿಂದ ಹೊರಗಟ್ಟಿದ್ದು, ಈಗ ಅವರು ಸಂತ್ರಸ್ತರ ಕೇಂದ್ರದಲ್ಲಿ (ಒನ್ ಸ್ಟಾಪ್ ಸೆಂಟರ್) ಆಶ್ರಯ ಪಡೆಯುವಂತಾಗಿದೆ.
ಸುಪ್ರೀಂಕೋರ್ಟ್ನ ಆದೇಶದ ನಂತರ ಕನಕ ದುರ್ಗಾ ಹಾಗೂ ಬಿಂದು ಹೆಸರಿನ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿದ್ದರು. ಮನೆಗೆ ವಾಪಾಸಾದ ನಂತರ ಕನಕ ದುರ್ಗಾ ಮೇಲೆ ಅವರ ಅತ್ತೆಯೇ ಹಲ್ಲೆ ನಡೆಸಿದ್ದರು. ಈ ವೇಳೆ ಗಾಯಗೊಂಡ ಕನಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಚೇತರಿಕೆ ಕಂಡಿರುವ ಅವರು ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ.
ಆಸ್ಪತ್ರೆಯಿಂದ ಕನಕಾ ಮತ್ತೆ ಮನೆ ಪ್ರವೇಶಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರ ಅಣ್ಣ ಹಾಗೂ ಗಂಡ ಇದಕ್ಕೆ ಅವಕಾಶ ನೀಡಲಿಲ್ಲ. ಅವರು ಪೊಲೀಸ್ ಠಾಣೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. ಹಾಗಾಗಿ, ಒನ್ ಸ್ಟಾಪ್ ಸೆಂಟರ್ನಲ್ಲಿ ಅವರಿಗೆ ಆಶ್ರಯ ನೀಡಲಾಗಿದೆ.
ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಈ ಬಗ್ಗೆ ತೀವ್ರ ವಿರೋಧ ಕೇಳಿ ಬಂದಿತ್ತು. ಅಲ್ಲದೆ, ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿಯೂ ಸಲ್ಲಿಕೆ ಆಗಿದೆ.
ಕನಕ ದುರ್ಗಾ ಹಾಗೂ ಬಿಂದು ಸುಪ್ರೀಂಕೋರ್ಟ್ನ ಆದೇಶದ ನಂತರದಲ್ಲಿ ಶಬರಿಮಲೆ ಪ್ರವೇಶಿಸಿದ ಮೊದಲ ಮಹಿಳೆಯರು. ಇವರು ದೇವಾಲಯಕ್ಕೆ ಕಾಲಿಟ್ಟ ನಂತರದಲ್ಲಿ ಕೇರಳಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಕೆಲ ಕಡೆಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಗ್ಗೆ ವರದಿಯಾಗಿದೆ. ಸಿಪಿಐಎಂ ನಾಯಕರ ಮನೆಯ ಮೇಲೆ ಬಾಂಬ್ ದಾಳಿ ಕೂಡ ನಡೆದಿತ್ತು. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎನ್ನುವ ಆರೋಪ ಕೇಳಿ ಬಂದಿದೆ.
Comments are closed.