ಲಕ್ನೋ: ಉತ್ತರ ಪ್ರದೇಶದಲ್ಲಿ ಸಾರ್ವಜನಿಕರ ಎದುರು ಪೊಲೀಸರ ದರ್ಪ ಮತ್ತೆ ಮುಂದುವರೆದಿದೆ. ಈ ಬಾರಿ ಲಕ್ನೋ ಸಬ್ ಇನ್ಸ್ಪೆಕ್ಟರ್ ಒಬ್ಬರು ಕಾಲು ಮೇಲೆ ಕಾಲು ಹಾಕಿಕೊಂಡು ಸಾರ್ವಜನಿಕ ಎದುರು ದರ್ಪದಿಂದ ಕುಳಿತುಕೊಂಡಿದ್ದು, ಆತನ ಮುಂದೆ 75 ವರ್ಷದ ವಯೋವೃದ್ಧೆಯೊಬ್ಬರು ಅಂಗಲಾಚಿ ಬೇಡಿಕೊಳ್ಳುತ್ತಿರುವ 27 ಸೆಕೆಂಡ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾರ್ವಜನಿಕವಾಗಿ ದರ್ಪ ತೋರಿದ ಗುಡಂಬಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತೇಜ್ ಪ್ರತಾಪ್ ಸಿಂಗ್ ನನ್ನು ಲಕ್ನೋ ಎಸ್ಎಸ್ಪಿ ಕುಲನಿಧಿ ನೈಥಾನಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಬ್ರಹ್ಮದೇವಿ ಅವರು ತನ್ನ ಮೊಮ್ಮಗ ಇಪ್ಪತ್ತು ವರ್ಷದ ಅಕಾಶ್ ಯಾದವ್ ಕೊಲೆಗೆ ಸಂಬಂಧಪಟ್ಟಂತೆ ಎಫ್ಐಆರ್ ದಾಖಲಿಸುವಂತೆ ಇನ್ಸ್ಪೆಕ್ಟೆರ್ ಕಾಲಿಗೆ ಬೀಳಲು ಮುಂದಾಗುತ್ತಾಳೆ. ಪ್ಲೆವುಡ್ ಫ್ಯಾಕ್ಟರಿಯಲ್ಲಿ ಆಕೆಯ ಮೊಮ್ಮಗ ಕೆಲಸ ಮಾಡಿಕೊಂಡಿದ್ದು, ಫ್ಯಾಕ್ಟರಿ ಮಾಲೀಕನೇ ಆತನನ್ನು ಕೊಲೆ ಮಾಡಿದ್ದಾನೆ ಎಂದು ಆಕೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದರೂ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. ಹೀಗಾಗಿ ಎಫ್ಐಆರ್ ದಾಖಲಿಸುವಂತೆ ಆ ವಯೋವೃದ್ಧೆ ಇನ್ಸ್ಪೆಕ್ಟರ್ ಬಳಿ ಅಂಗಲಾಚಿ ಬೇಡಿಕೊಳ್ಳುತ್ತಾಳೆ.
ಸಂಬಂಧಿಕರು ಹಾಗೂ ಸ್ನೇಹಿತರು ಹೇಳುವ ಪ್ರಕಾರ ಆಕಾಶ್ ಕೊಲೆಗೆ ಫ್ಯಾಕ್ಟರಿ ಮಾಲೀಕ ಅಜಯ್ ಗುಪ್ತಾನೇ ಕಾರಣ. ಕೊಲೆಯಾದ ನಂತರ ಆತ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಪೊಲೀಸರು ಅದನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಘಟನೆ ನಡೆದ ಗುದಂಬ ಪೊಲೀಸ್ ಠಾಣೆ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದಕ್ಕೆ ಮತ್ತು ವಿನಯವಂತಿಕೆ, ಶಿಸ್ತಿನ ಪೊಲೀಸ್ ಅಧಿಕಾರಿಗಳನ್ನು ಹೊಂದಿರುವ ಪೊಲೀಸ್ ಠಾಣೆ ಪಟ್ಟಿಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಂದಲೂ ಈ ಠಾಣೆ ಗೌರವಿಸಲ್ಪಟ್ಟಿದೆ.
Comments are closed.