ರಾಷ್ಟ್ರೀಯ

2002ರ ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣ: ದೇರಾ ಸಚ್ಚಾ ಸೌದಾದ ಗುರ್ಮೀತ್ ಬಾಬಾ ಸೇರಿ ನಾಲ್ವರು ತಪ್ಪಿತಸ್ಥರು

Pinterest LinkedIn Tumblr


ಚಂಡೀಗಡ: 16 ವರ್ಷಗಳ ಹಿಂದಿನ ಪತ್ರಕರ್ತರೊಬ್ಬರ ಕೊಲೆ ಪ್ರಕರಣದಲ್ಲಿ ದೇರಾ ಸಚ್ಚಾ ಸೌದಾ ಎಂಬ ಧಾರ್ಮಿಕ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಸೇರಿದಂತೆ ನಾಲ್ವರನ್ನು ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಕೃಷನ್ ಲಾಲ್, ಕುಲದೀಪ್ ಸಿಂಗ್ ಮತ್ತು ನಿರ್ಮಲ್ ಸಿಂಗ್ ಅವರು ದೋಷಿಗಳಾದ ಇತರ ಮೂವರಾಗಿದ್ದಾರೆ. 2002ರ ಅಕ್ಟೋಬರ್​ನಲ್ಲಿ ಪತ್ರಕರ್ತ ರಾಮಚಂದ್ರ ಛತ್ರಪತಿ ಅವರ ಕೊಲೆಯಾಗಿತ್ತು. 2003ರಲ್ಲಿ ಪ್ರಕರಣ ದಾಖಲಾದರೆ. 2006ರಲ್ಲಿ ಸಿಬಿಐ ಹೆಗಲಿಗೆ ತನಿಖೆಯ ಜವಾಬ್ದಾರಿ ಕೊಡಲಾಯಿತು. ಈಗ ಕೊಲೆಯಾಗಿ 16 ವರ್ಷಗಳ ನಂತರ ಪ್ರಕರಣಕ್ಕೆ ನ್ಯಾಯ ಸಿಕ್ಕಿದೆ. ಸಿಬಿಐ ವಿಶೇಷ ನ್ಯಾಯಾಲಯವು ಜನವರಿ 17ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ. ಅಪರಾಧಿ ರಾಮ್ ರಹೀಮ್​ಗೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಇರುವ ಕಾರಣ ಎಲ್ಲಿಯೂ ಗಲಭೆಯಾಗದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ರಾಮ್ ರಹೀಮ್ ಪರ ವಕೀಲ ಸರಬ್ಜೀತ್ ಸಿಂಗ್ ವಾರಿಯಾಕ್ ಅವರು ತಿಳಿಸಿದ್ದಾರೆ.

‘ಪೂರಾ ಸಚ್’ ಎಂಬ ಪತ್ರಿಕೆ ನಡೆಸುತ್ತಿದ್ದ ಪತ್ರಕರ್ತ ರಾಮಚಂದ್ರ ಛತ್ರಪತಿ ಅವರು ತಮ್ಮ ಪತ್ರಿಕೆಯಲ್ಲಿ ಬಾಬಾ ರಾಮ್ ರಹೀಮ್​ನ ಕರ್ಮಕಾಂಡಗಳನ್ನ ಬಯಲಿಗೆಳೆದಿದ್ದರು. ಪಂಜಾಬ್​ನ ಸಿರ್ಸಾದಲ್ಲಿರುವ ದೇರಾ ಸಚ್ಚಾ ಸೌದಾದ ಮುಖ್ಯಕಚೇರಿಯಲ್ಲಿ ರಾಮ್ ರಹೀಮ್ ಬಾಬಾ ಮಹಿಳೆಯರನ್ನು ಹೇಗೆ ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂಬ ಸಂಗತಿ ಬಗ್ಗೆ ಬೆಳಕು ಚೆಲ್ಲುವ ಪತ್ರವೊಂದನ್ನು ಛತ್ರಪತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಅದಾದ ಬಳಿಕ ಛತ್ರಪತಿಯ ಹತ್ಯೆಯಾಗಿತ್ತು.

ಗುರ್ಮೀತ್ ಬಾಬಾ ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಆರೋಪಗಳನ್ನ ಎದುರಿಸುತ್ತಿದ್ಧಾರೆ. ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲುಶಿಕ್ಷೆಯನ್ನೂ ಪಡೆದಿರುವ ಬಾಬಾ ಈಗಾಗಲೇ ರೋಹ್ತಕ್​ನ ಸುನೇರಿಯಾ ಜೈಲಿನಲ್ಲಿ ಕೈದಿಯಾಗಿದ್ದಾರೆ. ಇವತ್ತಿನ ಕೋರ್ಟ್ ಕಲಾಪಕ್ಕೆ ಬಾಬಾ ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರಿದ್ದರು. ಕೋರ್ಟ್​ಗೆ ಬಾಬಾ ಆಗಮಿಸಿದರೆ ಅವರ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿ ಕೋರ್ಟ್ ಆವರಣಕ್ಕೆ ಆಗಮಿಸಿ ಗಲಭೆಗಳಾಗುವ ಸಾಧ್ಯತೆ ಇದ್ದರಿಂದ ವಿಡಿಯೋ ಕಾನ್ಫೆರೆನ್ಸ್ ವ್ಯವಸ್ಥೆ ಮಾಡಲಾಯಿತು.

Comments are closed.