ಲಕ್ನೋ: ಮಹಿಳಾ ಅಧಿಕಾರಿಯೊಬ್ಬರಿಗೆ ಬಿಜೆಪಿ ಶಾಸಕರು ನಡುರಸ್ತೆಯಲ್ಲಿ, ನೂರಾರು ಜನರ ಎದುರು ಬೆದರಿಕೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೇಸರಿ ಪಕ್ಷದ ಈ ನಾಯಕನ ನಡವಳಿಕೆ ಬಗ್ಗೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನೀನು ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಿಯಾ… ಅದಕ್ಕೆ ಸಾಕ್ಷಿ ಬೇಕಾ, ಅದು ನನ್ನ ಬಳಿ ಇದೆ. ನೀನು ಕೇವಲ ಎಸ್ಡಿಎಂ (ಉಪ ವಿಭಾಗ ಮ್ಯಾಜಿಸ್ಟ್ರೇಟ್)? ನಿನಗೆ ಗೊತ್ತಾ, ನಾನು ಶಾಸಕ… ನನ್ನ ಅಧಿಕಾರ ಶಕ್ತಿಯ ಬಗ್ಗೆ ನಿನಗೆ ಗೊತ್ತಿಲ್ಲ. ಪ್ರಜಾಪ್ರಭುತ್ವದ ವಾಸ್ತವ ತಿಳಿದಿಲ್ಲ. ನೀನು ಕೇವಲ ಸೇವಕಿ…” ಎಂದು ಕಿರವಾಲಿ ಎಸ್ಡಿಎಂ ಗರಿಮಾ ಸಿಂಗ್ ಎಂಬ ಮಹಿಳೆಗೆ ಫತೇಪುರ್ ಸಿಕ್ರಿ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಬಾನ್ ಚೌದರಿ ಏರುದನಿಯಲ್ಲಿ ಹೇಳುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಬೆಳೆ ಹಾನಿ ಪರಿಹಾರ ವಿತರಣೆಗೆಂದು ಸೋಮವಾರ ಶಾಸಕರು ಆಗ್ರಾದ ಕಿರವಾಲಿ ತೆಹಸಿಲ್ ಭಾಗಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಶಾಸಕರು ಮಹಿಳೆಗೆ ಬೈಯ್ಯುವಾಗ ಗುಂಪಿನಿಂದ ಎಸ್ಡಿಎಂ ಜಿಂದಾಬಾದ್ ಎಂಬ ಘೋಷಣೆ ಕೂಗುತ್ತಿರುವುದು ಅಸ್ಪಷ್ಟವಾಗಿ ಕೇಳಿಬರುತ್ತದೆ.
ಈ ವಿಚಾರವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಜಿ.ರವಿಕುಮಾರ್ ಅವರು ಗರಿಮಾ ಸಿಂಗ್ ಅವರನ್ನು ಕರೆದು, ಘಟನೆ ಬಗ್ಗೆ ವಿವರ ಪಡೆದಿದ್ದಾರೆ ಮತ್ತು ಶಾಸಕರ ಜೊತೆಗೆ ಈ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಸರ್ಕಾರಿ ಅಧಿಕಾರಿಗಳನ್ನು ರಾಜಕಾರಣಿಗಳು ನಡೆಸಿಕೊಳ್ಳುತ್ತಿರುವ ರೀತಿಗೆ ಟ್ವೀಟ್ವಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕ ಉದಯ್ ಬಾನ್ ಚೌಧರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ರಾಜಸ್ಥಾನದ ಬಿಜೆಪಿ ಶಾಸಕರೊಬ್ಬರು ಸರ್ಕಾರಿ ಅಧಿಕಾರಿಗೆ ಬೆದರಿಕೆಯೊಡ್ಡಿ ಹೊಡೆದಿದ್ದರು. ಮತ್ತು ಉತ್ತರಾಖಂಡದ ಶಾಸಕ ರಾಜಕುಮಾರ್ ಠಾಕ್ರೆ ಅವರು ಮಹಿಳಾ ಸಬ್ಇನ್ಸ್ಪೆಕ್ಟರ್ಗೆ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಬಿಜೆಪಿ ಭಾರಿ ಮುಖಭಂಗ ಉಂಟು ಮಾಡಿದ್ದವು. ಇದೀಗ ಮತ್ತೆ ಮಹಿಳಾ ಅಧಿಕಾರಿಗೆ ದಮ್ಕಿ ಹಾಕುವ ಮೂಲಕ ಬಿಜೆಪಿ ಮುಜುಗರಕ್ಕೆ ಈಡಾಗಿದೆ.
Comments are closed.