ಕಾಸರಗೋಡು: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ಹೇಳಿಕೆ ನೀಡಿದ್ದ ಕೇರಳ ಸರ್ಕಾರದ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಕೇರಳದ ದೇವಸ್ಥಾನದ ಅರ್ಚಕನನ್ನು ಅಮಾನತು ಮಾಡಲಾಗಿದೆ.
ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿಯ ದರ್ಶನ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ, ಇದಕ್ಕೆ ಸಂಪ್ರದಾಯವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸುಪ್ರೀಂಕೋರ್ಟ್ನ ತೀರ್ಪನ್ನು ಜಾರಿಗೆ ತರಲು ಮುಂದಾಗಿದ್ದ ಕೇರಳ ಸರ್ಕಾರದ ವಿರುದ್ಧವೂ ಅನೇಕರು ಪ್ರತಿಭಟನೆ ನಡೆಸಿದ್ದರು.
ಶಬರಿಮಲೆ ಪ್ರವೇಶ ವಿವಾದಕ್ಕೆ ಸಂಬಂಧಿಸಿದಂತೆ ಕೇರಳದ ಸರ್ಕಾರದ ಮುಜರಾಯಿ ಇಲಾಖೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರ ವಿರುದ್ಧ ಅವಹೇಳನಕಾರಿಯಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ದೇವಸ್ಥಾನದ ಮುಖ್ಯ ಅರ್ಚಕ ಟಿ. ಮಾಧವನ್ ನಂಬೂದಿರಿ ಅವರ ವಿರುದ್ಧ ಕ್ರಮ ಕೈಗೊಂಡು ಕೆಲಸದಿಂದ ವಜಾಗೊಳಿಸಲಾಗಿದೆ.
ಮಲಬಾರ್ ದೇವಸ್ವಂ ಮಂಡಳಿಯ ಅಧೀನಕ್ಕೆ ಬರುವ ಈ ದೇವಸ್ಥಾನದ ಅರ್ಚಕನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದೆಂದು ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುಪ್ರೀಂಕೋರ್ಟ್ ಈ ಬಗ್ಗೆ ಮರುಪರಿಶೀಲನಾ ಅರ್ಜಿಯನ್ನು ಜನವರಿಗೆ ಮುಂದೂಡಿದ ನಂತರ ಕೇರಳದಲ್ಲಿ ಗಲಭೆ ಇನ್ನೂ ಹೆಚ್ಚಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿಯೇ ಅಯ್ಯಪ್ಪಸ್ವಾಮಿ ಪೂಜೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.
Comments are closed.