ಜೈಪುರ: ಭಾರತಕ್ಕೆ ಸ್ವಾತಂತ್ರ್ಯ ಲಭಿಸಲು ನಮ್ಮ ದೇಶದಲ್ಲಿ ಎಂತೆಂಥಾ ರಕ್ತಕ್ರಾಂತಿಯೇ ಆಯಿತು, ಎಷ್ಟೆಷ್ಟೋ ಹೋರಾಟಗಾರರು ಪ್ರಾಣತ್ಯಾಗ ಮಾಡಿದರು. ಅವರೆಲ್ಲರ ಶ್ರಮದ ಫಲವಾಗಿ ಬ್ರಿಟಿಷರಿಂದ ಮುಕ್ತಿ ಸಿಕ್ಕು 71 ವರ್ಷಗಳಾದವು. ಆದರೆ, ಬಿಎಸ್ಪಿ ಮುಖಂಡ ಧರ್ಮವೀರ ಸಿಂಗ್ ಹೇಳುವ ಪ್ರಕಾರ, ಬ್ರಿಟಿಷರು ಇನ್ನೂ 100 ವರ್ಷ ದೇಶವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರೆ ನಾವೆಲ್ಲ ಉದ್ಧಾರವಾಗುತ್ತಿದ್ದೆವು!
ಹೌದು, ಬಿಎಸ್ಪಿ ನಾಯಕನ ಈ ಹೇಳಿಕೆ ಸದ್ಯಕ್ಕೆ ವಿವಾದ ಸೃಷ್ಟಿಸಿದೆ. ಇಂದು ಜೈಪುರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬ್ರಿಟಿಷ್ ಪರವಾಗಿ ಮಾತನಾಡಿರುವ ಧರ್ಮಸಿಂಗ್, ಬ್ರಿಟಿಷರು ಭಾರತವನ್ನು ಇನ್ನೂ ನೂರು ವರ್ಷ ಆಳ್ವಿಕೆ ಮಾಡಿದ್ದರೆ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರಿಗೆ ಇಷ್ಟೊಂದು ಅನ್ಯಾಯವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂಬೇಡ್ಕರ್ ಓದಿದ್ದೇ ಬ್ರಿಟಿಷರಿಂದ:
ನಮ್ಮ ಸಂವಿಧಾನವನ್ನು ರಚಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಓದಲು ಅವಕಾಶ ಕಲ್ಪಿಸಿಕೊಟ್ಟಿದ್ದು ಬ್ರಿಟಿಷರು. ಅವರಿಗೆ ವಿದೇಶದಲ್ಲಿ ಕಲಿಯಲು ಅವಕಾಶ ನೀಡದಿದ್ದರೆ ಸಮಾಜದಲ್ಲಿ ಇಷ್ಟೊಂದು ಬದಲಾವಣೆ ತರಲು ಸಾಧ್ಯವಾಗುತ್ತಿರಲಿಲ್ಲ. ಒಂದುರೀತಿಯಲ್ಲಿ ನಮ್ಮ ಸಂವಿಧಾನ ರಚನೆಯಾಗಲು ಬ್ರಿಟಿಷರ ಕೊಡುಗೆಯೂ ಇದೆ ಎನ್ನಬಹುದು. ಒಂದುವೇಳೆ ಬ್ರಿಟಿಷರು ಭಾರತಕ್ಕೆ ಬರದಿದ್ದರೆ ಅಂಬೇಡ್ಕರ್ ಅವರನ್ನೊಳಗೊಂಡು ಯಾವ ಹಿಂದುಳಿದ ವರ್ಗದವರಿಗೂ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
ಧರ್ಮವೀರ ಸಿಂಗ್ ಅವರ ಮಾತುಗಳ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಭಾರೀ ವಿರೋಧ ವ್ಯಕ್ತವಾಗಿದೆ. ಈ ರೀತಿ ಹೇಳುವ ಮೂಲಕ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ಅವಮಾನಿಸಿದ್ದಾರೆ. ಬ್ರಿಟಿಷರ ಆಡಳಿತ ಅಷ್ಟೊಂದು ಇಷ್ಟವಾದರೆ ಅವರ ಋಣ ತೀರಿಸಲು ಇಂಗ್ಲೆಂಡ್ಗೇ ಹೋಗಿ ನೆಲೆಸಲಿ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
Comments are closed.