ರಾಷ್ಟ್ರೀಯ

ಹಿಂದೂ ಧರ್ಮದ ಬಗ್ಗೆ ಆಕರ್ಷಿತರಾಗಿರುವ ಹಾಲಿವುಡ್ ನಟ ವಿಲ್ ಸ್ಮಿತ್’ನಿಂದ ಹರಿದ್ವಾರದಲ್ಲಿರುವ ಶಿವನ ಮಂದಿರದಲ್ಲಿ ರುದ್ರಾಭಿಷೇಕ !

Pinterest LinkedIn Tumblr

ಡೆಹ್ರಾಡೂನ್: ವಿದೇಶಿಗರು ಹಿಂದೂ ಧರ್ಮಕ್ಕೆ ಮಾರುಹೋಗುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ವಿಷಯ. ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಅಂತಾರಾಷ್ಟ್ರೀಯ ಖ್ಯಾತ ನಾಮರು ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ಬಾರಿ ಈ ಪಟ್ಟಿಗೆ ಸೇರಿಕೊಂಡಿರುವುದು ಹಾಲಿವುಡ್ ನ ನಟ ವಿಲ್ ಸ್ಮಿತ್.

ಸನಾತನ ಧರ್ಮದ ಬಗ್ಗೆ ಆಕರ್ಷಿತರಾಗಿರುವ ವಿಲ್ ಸ್ಮಿತ್ ವೈದಿಕ ಜ್ಯೋತಿಷಿಯೊಬ್ಬರ ಸಲಹೆಯಂತೆ ನಿರ್ದಿಷ್ಟ ಗ್ರಹ ಸ್ಥಿತಿಗಳಿಂದ ಉಂಟಾಗುವ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಹರಿದ್ವಾರದಲ್ಲಿರುವ ಶಿವನ ಮಂದಿರದಲ್ಲಿ ರುದ್ರಾಭಿಷೇಕ ಮಾಡಿಸಿದ್ದಾರೆ.

ಪ್ರದೀಪ್ ಮಿಶ್ರಪುರಿ ಎಂಬ ಜ್ಯೋತಿಷಿ ನೀಡಿರುವ ಮಾಹಿತಿಯ ಪ್ರಕಾರ ಶನಿ ಗ್ರಹದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ವಿಲ್ ಸ್ಮಿತ್ ಶಿವನ ದೇವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿದ್ದಾರಂತೆ.

“ವಿಲ್ ಸ್ಮಿತ್ ಅವರ ಜಾತಕವನ್ನು ಪರಿಶೀಲಿಸಿ ಅವರ ಜೀವನದಲ್ಲಿ ನಡೆದಿರುವ ಮುಖ್ಯ ಘಟನಾವಳಿಗಳನ್ನು ಹೇಳಿದೆ. ಭವಿಷ್ಯ ವಿಶ್ಲೇಷಣೆಯ ನಿಖರತೆಗೆ ಅಚ್ಚರಿಗೊಂಡ ವಿಲ್ ಸ್ಮಿತ್ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಸಲಹೆಯನ್ನು ಪರಿಗಣಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ” ಎಂದು ಪ್ರದೀಪ್ ಮಿಶ್ರಪುರಿ ಹೇಳಿದ್ದಾರೆ.

ಇದೇ ವೇಳೆ ಗಂಗಾ ನದಿ ತೀರದಲ್ಲಿ ಗಂಗಾ ಆರತಿಯನ್ನೂ ಸಹ ವಿಲ್ ಸ್ಮಿತ್ ಸಲ್ಲಿಸಿದ್ದು, “ಭಾರತೀಯ ಆಧ್ಯಾತ್ಮ ಹಾಗೂ ಜ್ಯೋತಿಷ್ಯಕ್ಕೆ ಆಳವಾದ ನಂಟಿರುವುದು ನನಗೆ ಗೋಚರಿಸಿದೆ” ಎಂದು ಹೇಳಿದ್ದಾರೆ. ರುದ್ರಾಭಿಷೇಕ ಮಾಡುವುದಕ್ಕೂ ಮುನ್ನ ವಿಲ್ ಸ್ಮಿತ್ ಪ್ರತಿ ರುದ್ರ ಮಂತ್ರದ ಅರ್ಥ ಹಾಗೂ ಮಹತ್ವ ತಿಳಿದುಕೊಂಡು ನಂತರ ಪೂಜೆ ಮಾಡಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ. ಹಾಲಿವುಡ್ ನ ಹಲವು ನಟರು ಪ್ರದೀಪ್ ಮಿಶ್ರ ಪುರಿಯನ್ನು ಸಂಪರ್ಕಪಿಸಿದ್ದಾರೆ.

Comments are closed.