ರಾಷ್ಟ್ರೀಯ

ಪತಿಯಿಂದ ಅತ್ಯಾಚಾರ: ವಾಟ್ಸ್‌ಆ್ಯಪ್‌ ನಿಂದ ದೂರು ದಾಖಲಿಸಿದ ಸಂತ್ರಸ್ಥೆ

Pinterest LinkedIn Tumblr


ಕಲ್ಯಾಣ್: ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ದೂರು ದಾಖಲಿಸಿಕೊಳ್ಳಲು ಸ್ಥಳೀಯ ಪೊಲೀಸರು ನಿರಾಕರಿಸುತ್ತಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ಥಾಣೆಯ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರಿಗೆ ವಾಟ್ಸ್‌ಆ್ಯಪ್‌ ಸಂದೇಶ ರವಾನಿಸಿದ ಬೆನ್ನಲ್ಲೆ ಎಚ್ಚೆತ್ತುಕೊಂಡ ವಿಷ್ಣು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಏನಿದು ಘಟನೆ?

ವೃತ್ತಿಯಲ್ಲಿ ಚಾಲಕನಾಗಿರುವ ಭಿವಾಂಡಿ ನಿವಾಸಿ ಸಚಿನ್ ಪಾಟೀಲ್ (29) ಎಂಬಾತ ಸಾಮಾಜಿಕ ಜಾಲತಾಣದಲ್ಲಿ ದೂರುದಾರ ಮಹಿಳೆಯನ್ನು ಪರಿಚಯಿಸಿಕೊಂಡು ಪ್ರೀತಿ-ಪ್ರೇಮದ ನಾಟಕವಾಡಿದ್ದ. ಅಷ್ಟೇ ಅಲ್ಲದೆ, ವಿವಾಹವಾಗುವುದಾಗಿ ನಂಬಿಸಿ ಮಹಿಳೆಯ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿನ್ ಪಾಟೀಲ್ ಎಂಬ ಢೋಂಗಿ ಪ್ರೇಮಿ ಮಹಿಳೆಯನ್ನು ದೇವಸ್ಥಾನವೊಂದಕ್ಕೆ ಕರೆದೊಯ್ದು ವಿವಾಹವಾಗಿದ್ದು, ತನ್ನೆಲ್ಲ ತೀಟೆ ತೀರಿದ ಬಳಿಕ ‘ನಮ್ಮಿಬ್ಬರ ವಿವಾಹಕ್ಕೆ ಕಾನೂನು ಮಾನ್ಯತೆಯೇ ಇಲ್ಲ’ ಎಂದು ಮಹಿಳೆಗೆ ಕೈಕೊಟ್ಟು ಪಾರಾರಿಯಾಗಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಸಚಿನ್ ಮಹಿಳೆಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿದ್ದು, ಆಕೆಯ ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಅಶ್ಲೀಲ ಸಂದೇಶ ರವಾನಿಸುವ ಮೂಲಕ ಕಿರುಕುಳು ನೀಡುತ್ತಿದ್ದ ಎಂದು ಪೊಲೀಸರು ವಿವಿರಿಸಿದ್ದಾರೆ.

ಈ ಸಂಬಂಧ ಸಂತ್ರಸ್ತ ಮಹಿಳೆ ವಿಷ್ಣು ನಗರ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ಥಾಣೆ ಪೊಲೀಸ್ ಆಯುಕ್ತರಿಗೆ ವಾಟ್ಸ್‌ಆ್ಯಪ್‌ ಸಂದೇಶ ರವಾನಿಸಿದ್ದರು.

ಅತ್ಯಾಚಾರ ಪ್ರಕರಣದ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸಚಿನ್ ಪಾಟೀಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Comments are closed.