ರಾಷ್ಟ್ರೀಯ

107ನೆ ಹರೆಯದ ಮುಸ್ಲಿಂ ಕುಸ್ತಿಪಟುವಿನಿಂದ ಮೊದಲ ಬಾರಿಗೆ ಸಾರ್ವಜನಿಕ ಗಣೇಶ ಹಬ್ಬ ಆಚರಣೆ!

Pinterest LinkedIn Tumblr


ವಡೋದರಾ: ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಕೋಮು ಸಂಘರ್ಷ ತಡೆಯಲು ನಗರದ ಪೊಲೀಸರು ಪ್ರತಿ ವರ್ಷ ಪರದಾಡುತ್ತಿರುತ್ತಾರೆ. ಅದರಲ್ಲೂ ಗಣೇಶ ವಿಸರ್ಜನೆ ಮಾಡುವ ದಿನಗಳಲ್ಲಿ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಮೆರವಣಿಗೆ ನಡೆಯುವ ವೇಳೆ ಕೋಮು ಸಂಘರ್ಷಗಳು ಹೆಚ್ಚಾಗಿರುತ್ತದೆ. ಕಳೆದ ಕೆಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ, ಗುಜರಾತ್‌ನ ಸಂಸ್ಕಾರಿ ನಗರಿಯಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ಆರಂಭಿಸಿದವರು 107 ವರ್ಷದ ಮುಸಲ್ಮಾನ ವ್ಯಕ್ತಿ ಎಂದರೆ ನೀವು ಒಪ್ಪಿಕೊಳ್ಳಲೇಬೇಕು.

ರಾಷ್ಟ್ರೀಯ ಏಕೀಕರಣ ಮತ್ತು ದೇಶಭಕ್ತಿಯನ್ನು ಎತ್ತಿಹಿಡಿಯಲು 1901ರಲ್ಲೇ ಜುಮ್ಮಾ ದಾದಾ ಎಂಬ ಖ್ಯಾತ ಕುಸ್ತಿ ಪಟು ಅಂದಿನ ಬರೋಡಾ ರಾಜ್ಯದಲ್ಲಿ ಸಾರ್ವಜನಿಕ ಗಣೇಶವನ್ನಿಡಲು ಪ್ರೋತ್ಸಾಹಿಸಿದ್ದರು. ಅಲ್ಲದೆ, ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ಆಚರಿಸಲು ಲೋಕಮಾನ್ಯ ತಿಲಕ್ ಕರೆ ನೀಡಿದ್ದ ಹಿನ್ನೆಲೆ ಅವರಿಂದ ಸ್ಫೂರ್ತಿ ಪಡೆದಿದ್ದ ಜುಮ್ಮಾ ದಾದಾ ಸಾರ್ವಜನಿಕವಾಗಿ ಗಣಪನ ಹಬ್ಬವನ್ನು ಆಚರಿಸಲು ಆರಂಭಿಸಿದ್ದರು. ನಂತರ, ಮಹಾರಾಜ ಸಯ್ಯಾಜಿರಾವ್ ಮೂರನೇ ಗಾಯಕವಾಡರನ್ನು ಭೇಟಿಯಾಗಲು ಬರುತ್ತಿದ್ದ ತಿಲಕ್ ಜುಮ್ಮಾ ದಾದಾ ಹಾಗೂ ಅವರ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡು ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು.

19ನೇ ಶತಮಾನದ ಮಧ್ಯದಲ್ಲಿ ವ್ಯಾಯಾಮ ಮಂದಿರ ಸ್ಥಾಪಿಸಿದ್ದ ಜುಮ್ಮಾ ದಾದಾ 1880ರಲ್ಲಿ ಅದನ್ನು ನೋಂದಣಿ ಮಾಡಿಸಿದ್ದರು. ಬರೋಡಾದ ಯುವಕರು ಹಾಗೂ ಯುವತಿಯರಲ್ಲಿ ಈ ಅಖಾಡ ಅತ್ಯಂತ ಜನಪ್ರಿಯವಾದ ಹಿನ್ನೆಲೆ ವ್ಯಾಯಾಮ ಮಂದಿರದಲ್ಲೇ ಸಾರ್ವಜನಿಕ ಗಣೇಶ ಚತುರ್ಥಿಯನ್ನು ಆಯೋಜನೆ ಮಾಡಲು ತಿಲಕರು ಅವರಿಗೆ ಸಲಹೆ ನೀಡಿದ್ದರು. ಯುವಕರಲ್ಲಿ ಹೊಂದಾಣಿಕೆ ತರಲು ಹಾಗೂ ದೇಶಭಕ್ತಿಯ ಜತೆಗೆ ಸಂಭ್ರಮಾಚರಣೆ ಮಾಡುವುದು ಅವರ ಉದ್ದೇಶವಾಗಿತ್ತು.

ನಂತರ ಜುಮ್ಮಾ ದಾದಾ, 1901ರಲ್ಲಿ ವ್ಯಾಯಾಮ ಮಂದಿರದಲ್ಲಿ ಮಣ್ಣಿನ ಗಣೇಶನನ್ನು ತಂದು ಕೂರಿಸಿದ್ದರು. ಹಲವು ವರ್ಷಗಳ ಕಾಲ ಅದೇ ರೀತಿಯ ಹಾಗೂ ಅಷ್ಟೇ ಎತ್ತರದ ಗಣೇಶ ಮೂರ್ತಿಯನ್ನು ತಂದಿಡುತ್ತೇವೆ ಎಂದು ವ್ಯಾಯಾಮ ಮಂದಿರದ ಈಗಿನ ಟ್ರಸ್ಟಿ ಹಾರ್ಪಲೆ ಮಾಹಿತಿ ನೀಡಿದ್ದಾರೆ. ಈ ಮಾತನ್ನು ಪುಷ್ಟೀಕರಿಸುವ ಇತಿಹಾಸಕಾರ ಚಂದ್ರಶೇಖರ್ ಪಾಟೀಲ್, ನಗರದಲ್ಲಿ ಹಲವು ದೇವಾಲಯಗಳಲ್ಲಿ ಹಾಗೂ ಮಂಡಲಗಳು ಸಾರ್ವಜನಿಕ ಗಣೇಶನನ್ನು ಇಡುತ್ತಿದ್ದರೂ ಸಹ ಸಾಮೂಹಿಕವಾಗಿ ಐಕ್ಯತೆ ಹಾಗೂ ದೇಶಭಕ್ತಿ ತರುವಲ್ಲಿ ಜುಮ್ಮಾ ದಾದಾ ಮೊದಲಿಗರು ಎಂದು ಹೇಳುತ್ತಾರೆ. ಇನ್ನೊಂದೆಡೆ, ಜುಮ್ಮಾ ದಾದಾ 1901ರಲ್ಲಿ ಸಾರ್ವಜನಿಕವಾಗಿ ತಮ್ಮ ಅಖಾಡದಲ್ಲಿ ಗಣೇಶನನ್ನು ಇಡಲು ಆರಂಭಿಸಿದರೂ ಸಹ ಅವರ ಅನುಯಾಯಿ ಪ್ರೊಫೆಸರ್ ಮಾಣಿಕ್‌ ರಾವ್ ಅದನ್ನು ಮುಂದುವರೆಸಿದರು ಎಂದು ಮತ್ತೊಬ್ಬ ಇತಿಹಾಸಕಾರ ಡಾ. ದಾಮೋದರ್ ಮಾಹಿತಿ ನೀಡಿದ್ದಾರೆ.

Comments are closed.