
ಹೊಸದಿಲ್ಲಿ: ಕಿಂಗ್ಫಿಶರ್ ಏರ್ಲೈನ್ಸ್ ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾಲದಲ್ಲಿ ವಿಜಯ್ ಮಲ್ಯ ಜತೆ ಯುಪಿಎ ಸರಕಾರ ಹಲವಾರು ಒಪ್ಪಂದ ಮಾಡಿಕೊಂಡಿತ್ತು. ಗಾಂಧಿ ಕುಟುಂಬದ ಪ್ರಭಾವದಿಂದಲೇ ಮಲ್ಯಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಲಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಮಲ್ಯ ಹಾಗೂ ಗಾಂಧಿ ಕುಟುಂಬ ಆಪ್ತರಾಗಿರುವುದನ್ನು ಯಾರೂ ಮರೆಯಬಾರದು. ಗಾಂಧಿ ಕುಟುಂಬ ತಮ್ಮ ಪ್ರಯಾಣಕ್ಕೆ ಮಲ್ಯ ಅವರ ಕಿಂಗ್ಫಿಶರ್ ವಿಮಾನವನ್ನೇ ಆಯ್ಕೆ ಮಾಡಿಕೊಂಡಿತ್ತು. ಬ್ಯುಸಿನೆಸ್ ಕ್ಲಾಸ್ನ ಟಿಕೆಟ್ಗಳಲ್ಲಿ ಗಾಂಧಿ ಕುಟುಂಬ ಉಚಿತವಾಗಿ ಪ್ರಯಾಣಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಗಾಂಧಿ ಕುಟುಂಬ ಮಲ್ಯ ಹಾಗೂ ಕಿಂಗ್ಫಿಶರ್ ಏರ್ಲೈನ್ಸ್ಗೆ ಸಾಕಷ್ಟು ಸಹಾಯ ಮಾಡಿದೆ. ಇದಕ್ಕಾಗಿ ಅನೇಕ ಒಳ ಒಪ್ಪಂದಗಳನ್ನು ಮಾಡಲಾಗಿದೆ ಎಂದು ಬ್ಯಾಂಕ್ಗಳಿಂದ ಏರ್ಲೈನ್ಸ್ಗೆ ತೆಗೆದುಕೊಂಡಿರುವ ಸಾಲದ ಕೆಲವು ದಾಖಲೆಗಳನ್ನು ಬಹಿರಂಗಗೊಳಿಸಿದರು.
ಏರ್ಲೈನ್ಸ್ಗೆ ನೀಡಿರುವ ಸಾಲದ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಲವಾರು ಪತ್ರಗಳನ್ನು ಬರೆದಿದೆ. ಸೋನಿಯಾ ಗಾಂಧಿ ಯಾರ ಪರವಾಗಿದ್ದಾರೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತಿದ್ದು, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಸರಕಾರದ ಮುಖವಾಡದೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಅರುಣ್ ಜೇಟ್ಲಿ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂತಹ ವ್ಯಕ್ತಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ಅರ್ಹತೆ ಪಡೆದಿಲ್ಲ ಎಂದಿದ್ದಾರೆ.
Comments are closed.