ರಾಷ್ಟ್ರೀಯ

ಭಾರತ್ ಬಂದ್: ವಿವಿಧ ರಾಜ್ಯಗಳ ಕುರಿತು ವರದಿ

Pinterest LinkedIn Tumblr


ಹೊಸದಿಲ್ಲಿ: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಮತ್ತು ಭಾರತ್ ಬಂದ್ ನಡೆಸಲಾಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜತೆಗೆ ಕೆಲವೆಡೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ.

ಪುದುಚೇರಿಯಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ನಾಗರಿಕರು ತೊಂದರೆ ಅನುಭವಿಸಿದರು. ತಮಿಳುನಾಡು ಸರಕಾರಿ ಬಸ್‌ಗೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಖಾಸಗಿ ಕಾಲೇಜೊಂದರ ಬಸ್‌ಗೂ ಹಾನಿಮಾಡಲಾಗಿದೆ.

ಮಧ್ಯ ಪ್ರದೇಶದಲ್ಲಿ ವಿಪಕ್ಷ ಕಾಂಗ್ರೆಸ್‌ ಬಂದ್‌ಗೆ ಕರೆ ನೀಡಿದ್ದು, ಬಹುತೇಕ ಯಶಸ್ವಿಯಾಗಿದೆ. ಆದರೆ ಬಲವಂತವಾಗಿ ಬಂದ್ ಮಾಡಿಸಿ ಜನಸಾಮಾನ್ಯರಿಗೆ ಸಮಸ್ಯೆ ಉಂಟುಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಉತ್ತರ ಪ್ರದೇಶದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರಿಗೆ ತೊಂದರೆ ಉಂಟುಮಾಡುತ್ತಿರುವ ವಿಪಕ್ಷಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.

ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ಬಂದ್‌ಗೆ ಜನರು ಬೆಂಬಲ ನೀಡಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ಜನಜೀವನ ಎಂದಿನಂತೆ ಸಾಗಿದೆ.

ಬಿಹಾರದಲ್ಲಿ ಪ್ರತಿಭಟನಾಕಾರರ ರಸ್ತೆ ತಡೆಯಿಂದಾಗಿ ಆಂಬುಲೆನ್ಸ್ ಒಂದು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದು, ಅದರಲ್ಲಿದ್ದ 2 ವರ್ಷದ ಮಗುವೊಂದು ಸಕಾಲದಲ್ಲಿ ಚಿಕಿತ್ಸೆ ದೊರಕದೆ ಸಾವನ್ನಪ್ಪಿದೆ.

ಅಣ್ಣಾ ಸಾಲೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕನಿಷ್ಟ 300 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಭಾರತ್ ಬಂದ್ ಹೆಸರಿನಲ್ಲಿ ಬಸ್‌ಗಳಿಗೆ ಕಲ್ಲು ತೂರಾಟ, ಪೆಟ್ರೋಲ್ ಪಂಪ್‌ಗೆ ಬೆಂಕಿ ಹಚ್ಚಿರುವುದನ್ನು ಮತ್ತು ರೈಲುಗಳಿಗೆ ಹಾನಿಯೆಸಗಿರುವುದನ್ನು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಖಂಡಿಸಿದ್ದಾರೆ.

ಮುಂಬಯಿಯಲ್ಲಿ ಬೆಸ್ಟ್ ಬಸ್‌ಗಳಿಗೆ ವಿವಿಧೆಡೆ ಹಾನಿಯೆಸಗಿದ 14 ಪ್ರಕರಣ ವರದಿಯಾಗಿದೆ.

ಗುಜರಾತ್‌ನಲ್ಲಿ ರಸ್ತೆಯಲ್ಲಿ ಟೈರ್ ಹೊತ್ತಿಸಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಇಂಧನ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪೆಟ್ರೊಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 2 ರೂ. ಕಡಿತ ಮಾಡಿದ್ದಾರೆ.

Comments are closed.