ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ದೇಶ-ವಿದೇಶಗಳಿಂದ ಜನರು ಸಹಾಯಹಸ್ತ ಚಾಚುತ್ತಿದ್ದಾರೆ. ಬೇರೆ ಬೇರೆ ಸರ್ಕಾರಗಳೂ ಪರಿಹಾರವಾಗಿ ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿದ್ದವು. ಆದರೆ, ಪರಿಹಾರ ರೂಪದಲ್ಲಿ ಬಂದ ವಸ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕೇರಳ ಸರ್ಕಾರದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕೇರಳದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನೀಡಿರುವ ದೂರಿನ ಅನ್ವಯ ಎಸ್. ಥಾಮಸ್ ಮತ್ತು ಎಂ.ಪಿ. ದಿನೇಶ್ ಎಂಬ ಇಬ್ಬರು ಸರ್ಕಾರಿ ಅಧಿಕಾರಿಗಳು ಕೇರಳದ ನಿರಾಶ್ರಿತರಿಗಾಗಿ ದೇಶದ ಮೂಲೆಮೂಲೆಯಿಂದ ಬಂದಿದ್ದ ಪರಿಹಾರ ಸಾಮಗ್ರಿಗಳನ್ನು ಪನಮಾರಂ ಎಂಬ ಊರಿನ ನಿರಾಶ್ರಿತ ಕೇಂದ್ರದ ಬಳಿ ತಮ್ಮ ವಾಹನಗಳಿಗೆ ತುಂಬಿಕೊಳ್ಳುತ್ತಿದ್ದರು. ನಿರಾಶ್ರಿತರಿಗಾಗಿ ಬಂದಿದ್ದ ವಸ್ತುಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಥಾಮಸ್ ಮತ್ತು ದಿನೇಶ್, ಪನಮಾರಂ ನಿರಾಶ್ರಿತ ಕೇಂದ್ರದಿಂದ ಬೇರೊಂದು ಪ್ರದೇಶದಲ್ಲಿರುವ ನಿರಾಶ್ರಿತರಿಗಾಗಿ ವಾಹನದಲ್ಲಿ ವಸ್ತುಗಳನ್ನು ಸಾಗಿಸುತ್ತಿದ್ದೆವು. ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಸ್ಥಳೀಯರು ನಮ್ಮ ವಾಹನವನ್ನು ಅಡ್ಡಗಟ್ಟಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ರೀತಿಯ ಘಟನೆ ಚೆನಗನ್ನೂರ್ನಲ್ಲಿಯೂ ನಡೆದಿದ್ದು, ಇಲ್ಲಿನ ಸರ್ಕಾರಿ ಸಿಬ್ಬಂದಿಗಳು ಇದೇರೀತಿ ಪರಿಹಾರ ವಸ್ತುಗಳನ್ನು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
Comments are closed.