ಶ್ರೀನಗರ: ರಾಷ್ಟ್ರಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಕಾಶ್ಮೀರ ಕಣಿವೆಯಲ್ಲಿ ಮಾತ್ರ ಸೂತಕದ ಛಾಯೆ ಕಂಡುಬಂದಿದೆ. ಒಂದೆಡೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಬೆದರಿಕೆ, ಮತ್ತೊಂದೆಡೆ ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ವಿರುದ್ಧ ಪ್ರತಿಭಟನೆಗೆ ಕರೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಒದಗಿಸಿದ ಭಾರಿ ಬಿಗಿಭದ್ರತೆಯಿಂದ ಕಣಿವೆ ರಾಜ್ಯ ಅಕ್ಷರಶಃ ಸ್ತಬ್ಧಗೊಂಡಿದೆ.
ಹೆಚ್ಚಿನ ಕಾಶ್ಮೀರಿಗರು ಎಲ್ಲಿ ಏನು ಅನಾಹುತವಾಗುತ್ತದೋ ಎಂಬ ಭಯದಿಂದ ಹೊರಗೆ ಬಂದಿಲ್ಲ. ಅಂಗಡಿ, ಕಚೇರಿ, ಪೆಟ್ರೋಲ್ ಪಂಪ್ಗಳು ಮುಚ್ಚಿದ್ದು, ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿದೆ. ಕಣಿವೆಯಾದ್ಯಂತ ವಾಹನಗಳು ರಸ್ತೆಗಳಿದಿಲ್ಲ ಎಂದು ಕಾಶ್ಮೀರ್ ರೀಡರ್ ವರದಿ ಮಾಡಿದೆ.
ಈ ನಡುವೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಕಾಶ್ಮೀರಿಯತೆ ಎಂಬ ದೃಷ್ಟಿಕೋನದಂತೆ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮುಂದಾಗುವುದಾಗಿ ತಿಳಿಸಿದ್ದಾರೆ. ಕಾಶ್ಮೀರ ಜನತೆಯನ್ನು ಅಭಿವೃದ್ಧಿ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಎಲ್ಲಾ ರೀತಿಯ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರತ್ಯೇಕತಾವಾದಿಗಳಾದ ಸೈಯದ್ ಅಲಿ ಶಾ, ಮಿರ್ವೈಜ್ ಉಮರ್ ಫಾರೂಕ್ ಮತ್ತು ಯಾಸಿನ್ ಮಲ್ಲಿಕ್ ನೇತೃತ್ವದ ಸಂಘಟನೆಗಳು ಒಟ್ಟಾಗಿ ‘ಕಪ್ಪು ದಿನ’ವಾಗಿ ಸ್ವಾತಂತ್ರ್ಯ ದಿನವನ್ನು ನೋಡುವಂತೆ ಕರೆ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
ಪ್ರತಿಭಟನೆ ಹಿನ್ನೆಲೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಕ್ಷಣಾ ಪಡೆಗಳನ್ನು ಕಣಿವೆಯಾದ್ಯಂತ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಶ್ರೀನಗರದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಕೇಂದ್ರೀಯ ಮೀಸಲು ಪಡೆ ಮತ್ತು ಪೊಲೀಸರು ಕಾವಲು ನಿಂತಿದ್ದಾರೆ. ಶೇರ್ ಇ ಕಾಶ್ಮೀರ್ ಸ್ಟೇಡಿಯಂ ಸೇರಿದಂತೆ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಎಂದು ರೈಸಿಂಗ್ ಕಾಶ್ಮೀರ್ ವರದಿ ಮಾಡಿದೆ.
ಇಂಟರ್ನೆಟ್ ಸಂಪರ್ಕಕಡಿತ
ಕೆರಳಿಸುವಂತಹ ಮತ್ತು ಸುಳ್ಳು ಸುದ್ದಿಗಳು ಹರಡದಂತೆ ಎಚ್ಚರಿಕೆಯ ಸಲುವಾಗಿ ಕಣಿವೆಯಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಯ ವರೆಗೆ ಮೊಬೈಲ್ ಇಂಟರ್ನೆಟ್ ಸಂಪರ್ಕ ಕಡಿತ ಮಾಡಿರುವುದಾಗಿ ಗ್ರೇಟರ್ ಕಾಶ್ಮೀರ್ ವರದಿ ಮಾಡಿದೆ.
Comments are closed.